ಗೌರಿ ಲಂಕೇಶ್ ಕೊಲೆ ಆರೋಪಿ ರಿಷಿಕೇಶ್ 15 ದಿನಗಳ ಕಾಲ ಎಸ್ ಐಟಿ ವಶಕ್ಕೆ..
ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ರಿಷಿಕೇಶ್ ಯನ್ನು 15 ದಿನಗಳ ಕಾಲ ಎಸ್ ಐಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಅಮೋಲ್ ಖಾಳೆ ಎಂಬಾತನನ್ನು ಎಸ್ ಐಟಿ ಬಂಧಿಸಿತ್ತು. ಅಮೋಲ್ ಖಾಳೆ ಮಾಹಿತಿ ಮೇರೆಗೆ ಸಿಕ್ಕವನೇ ರಿಷಿಕೇಶ್. ಆರೋಪಿ ರಿಷಿಕೇಶ್ ತನ್ನ ಮೇಲೆ ಅನುಮಾನ ಬಂದಿದೆ ಎಂದು ತಿಳಿಯುತ್ತಿದ್ದಂತೆ ಜಾಣತನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ತನ್ನ ಬಳಿ ಇದ್ದ ಪಿಸ್ತೂಲ್ ಹಾಗೂ ಡೈರಿಯನ್ನು ವೈಭವ್ ರಾವತ್ ಎಂಬಾತನಿಗೆ ನೀಡಿ ಅದನ್ನ ಪೀಸ್ ಮಾಡಿ ಮಾಡಿ, ಸುಟ್ಟು ನದಿಗೆ ಹಾಕಲು ತಿಳಿಸಿರುತ್ತಾನೆ. ಹೀಗೆ ರಿಷಿಕೇಶ್ ತನ್ನ ಡೈರಿ, ಪಿಸ್ತೂಲಯನ್ನು ನಾಶ ಪಡಿಸಿರುತ್ತಾನೆ.
ನಂತರ ರಿಷಿಕೇಶ್ ತನ್ನ ಹೆಸರು ರಾಜೇಶ್ ಎಂದು ಹೇಳಿಕೊಂಡಿದ್ದ. ಪರ್ಸ್ ಕಳೆದು ಹೋಗಿದೆ ಹೀಗಾಗಿ ಯಾವುದೇ ಐಡಿ ಪ್ರೂಫ್ ಇಲ್ಲ. ನನಗೊಂದು ಕೆಲಸ ಕೊಡಿ ಎಂದು, ಪೆಟ್ರೋಲ್ ಬಂಕ್ ನಲ್ಲಿ ಸಾಮಾನ್ಯನಂತೆ, ಬಡವನಂತೆ 7000 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಎಸ್ ಐ ಟಿ ತನಿಖೆ ವೇಳೆ ತಿಳಿದು ಬಂದಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂವರೆ ವರ್ಷದ ಬಳಿಕ ಮತ್ತೊಬ್ಬ ಆರೋಪಿ ರಿಷಿಕೇಶ್ ದೇವಾಡಿಕರ್ ಅಲಿಯಾಸ್ ಮುರಳಿ ಎಂಬಾತನನ್ನು ಎಸ್ಐಟಿ ಪೊಲೀಸರು ಮೂರು ದಿನಗಳ ಹಿಂದೆ ಜಾರ್ಖಂಡ್ನಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ಗಳನ್ನು ನಾಶ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಎಸ್ಐಟಿ ತಂಡವು ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಿತ್ತು. ಈತ ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ.
ರಿಷಿಕೇಶ್ನನ್ನು ಇಂದು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದ ಎಸ್ಐಟಿ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ 30 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಎಸ್ಐಟಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 15 ದಿನಗಳ ಕಾಲ ವಶಕ್ಕೆ ಒಪ್ಪಿಸಿತು.