ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮುಂದೆ ಸಿಬ್ಬಂದಿಗಳಿಂದ ಧರಣಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ರಾಜ್ಯದೆಲ್ಲೆಡೆ ಕೊರೊನ ಅಟ್ಟಹಾಸ ಮುಂದುವರೆದಿದ್ದು ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಹರಸಾಹಸಪಡುತ್ತಿದ್ದು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಕಲಬುರಗಿಯ ಜಿಲ್ಲಾ ಆಸ್ಪತ್ರೆಯ ಮುಂದೆ ಸಾಂಕೇತಿಕ ಧರಣಿ ನಡೆಸಿದ್ದಾರೆ.
ಹೌದು… ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ವೇತನ ಪಾವತಿ ಮತ್ತು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಮತ್ತು ನರ್ಸ್ ಗಳಿಗೆ ಸೂಕ್ತ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕ್ವರೆಂಟೈನ್ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಅವರು ಪ್ರತಿನಿತ್ಯ ಕೆಲಸ ಮುಗಿಸಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯವರಲ್ಲಿ ಭಯದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆ ನೌಕರರಿಗೆ ಪ್ರತೇಕ ಕ್ವಾರೆಂಟೈನ್ ವ್ಯವಸ್ಥೆ ಮಾಡಬೇಕೆಂದು ಈ ಸಂದರ್ಭದಲ್ಲಿ ವೈದ್ಯರೊಬ್ಬರು ಮಾತನಾಡಿ ಆಗ್ರಹಿಸಿದರು.
ಈ ವೇಳೆಯಲ್ಲಿ ಆಸ್ಪತ್ರೆಯ ನೌಕರರಾದ ಚಂದ್ರಕಾಂತ ಏರಿ ಮಾತನಾಡಿ, ಆಸ್ಪತ್ರೆಯ ಗ್ರೂಪ್ ‘ಎ’ ಯಿಂದ ‘ಡಿ’ ವರೆಗಿನ ನೌಕರರ ಮಾರ್ಚ್ ತಿಂಗಳ ವೇತನ ಪಾವತಿಯಾಗದೇ, ಕುಟುಂಬಿಕ ಜೀವನದಲ್ಲಿ ಕಷ್ಟ ಉಂಟಾಗುತ್ತಿದೆ. ಬಾಡಿಗೆ ಮನೆಯಲ್ಲಿರುವ ನೌಕರ ಸ್ಥಿತಿ ಆತಂಕಕ್ಕೆ ಸಿಲುಕಿ, ಜೀವನ ನಡೆಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಕೂಡಲೇ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯ ನಿರ್ದೇಶಕರಿಗೆ ಮನವಿ ಮಾಡಿ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿದರು. ಇಂತಹ ಸಂದರ್ಭದಲ್ಲಿ ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನೆರವಿಗೆ ನಿಲ್ಲಬೇಕಾಗಿದೆ. ಇದನ್ನ ಬಿಟ್ಟು ಲಾಕ್ ಡೌನ್ ಒಂದೇ ಪರಿಹಾರ ಅಂದುಕೊಮಡು ಕೈಕಟ್ಟಿ ಕುಳಿತರೆ ಮುಂದೊಂದು ದಿನ ಚಿಕಿತ್ಸೆ ನೀಡುವವರಿಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.