ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?
ನವೆಂಬರ್ 03ರಂದು ಶಿರಾ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಬಿ ಜಯಚಂದ್ರ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಪುತ್ರ, ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಅವರ ಸ್ನೇಹಿತ ರಾಜೇಶ್ ಗೌಡ ಕಾಂಗ್ರೆಸ್ನಿಂದ ಟಿಕೆಟ್ ಸಿಗದೆ ಬೇಸರಗೊಂಡ ಬಿಜೆಪಿ ಸೇರಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಯತೀಂದ್ರ ಇಂದು ಜಯಚಂದ್ರ ಪರ ಶಿರಾದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಿರಾದಲ್ಲಿ ಆಕರ್ಷಣೆಯ ಕೇಂದ್ರ ಬಿಂದವಾಗಿದ್ದೇನೆ, ಏಕೆಂದರೇ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಮತ್ತು ನಾನು ಸ್ನೇಹಿತರು, ಆದರೆ ರಾಜಕೀಯದಲ್ಲಿ ನಾವು ಪರಸ್ಪರ ಸಹಾಯ ಮಾಡಲಾಗದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ,
ರಾಜೇಶ್ ಕಾಂಗ್ರೆಸ್ ಟಿಕೆಟ್ ಬಯಸಿದ್ದರು, ಹೀಗಾಗಿ ನನ್ನ ತಂದೆಯನ್ನು ಸಂಪರ್ಕಿಸಿದ್ದರು. ಆದರೆ ಜಯಚಂದ್ರ ಅವರು ಹಿರಿಯ ನಾಯಕರಾದ್ದರಿಂದ ರಾಜೇಶ್ ಗೆ ಟಿಕೆಟ್ ನೀಡಲಾಗಲಿಲ್ಲ, ಅವರು ಬಿಜೆಪಿ ಸೇರುತ್ತಾರೆ ಎಂದು ನನಗೆ ತಿಳಿದಿರಲಿಲ್ಲ, ನನಗೆ ಪಕ್ಷದ ತತ್ವ ಸಿದ್ಧಾಂತವೇ ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿರಾದಲ್ಲಿ ಕಮಲ ಅರಳಿಸಲು ತಂತ್ರ: ಜಾತಿ ರಾಜಕಾರಣಕ್ಕಿಳಿದ ಬಿಜೆಪಿ
ಡಾ. ರಾಜೇಶ್ ಗೌಡ ಅವರು ನನ್ನ ಸ್ನೇಹಿತರೇ. ಆದರೆ ವೈಯಕ್ತಿಕ ಸಂಬಂಧವೇ ಬೇರೆ ರಾಜಕೀಯವೇ ಬೇರೆ. ಅವರು ಸ್ನೇಹಿತರಾಗಿದ್ದಾಗ ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದರು. ನಾನು ಹಾಗೂ ಡಾ. ರಾಜೇಶ್ ಗೌಡ ಅವರು ಪಾಲುದಾರಿಕೆಯಲ್ಲಿ ಲ್ಯಾಬ್ ಕೂಡ ಮಾಡಿದ್ದೇವು. ಆಮೇಲೆ ಅದರಿಂದ ಹೊರಗೆ ಬಂದಿದ್ದೇನೆ.
ಡಾ. ರಾಜೇಶ್ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಭರವಸೆ ಕೊಟ್ಟಿರಲಿಲ್ಲ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ನಮ್ಮ ಹಿರಿಯರು, ಅದರೇ ಅಭ್ಯರ್ಥಿ ಅಂತಾ ಹೇಳಿದ್ದೇವು. ಟಿಕೆಟ್ ಕೊಡೊಕೆ ಆಗುವುದಿಲ್ಲ. ಪಕ್ಷಕ್ಕೆ ಸೇರಿ ಕೆಲಸ ಮಾಡಿ ಅಂತಾ ಹೇಳಿದ್ದೇವು ಎಂದು ಶಾಸಕ ಡಾ. ಯತೀಂದ್ರ ನೆನಪಿಸಿಕೊಂಡರು.
ಆದರೆ ಅವರಿಗೆ ಅವಸರಕ್ಕೆ ಟಿಕೆಟ್ ಬೇಕಾಗಿತ್ತು, ಹಾಗಾಗಿ ಬಿಜೆಪಿ ಸೇರಿದ್ದಾರೆ. ರಾಜೇಶ್ ಗೌಡ ಸ್ನೇಹಿತರು ಅನ್ನೋ ಕಾರಣಕ್ಕೆ ಪಕ್ಷ ನಿಷ್ಠೆ ಬಿಡುವುದಕ್ಕೆ ಆಗುವುದಿಲ್ಲ. ನಾನು ಅವರಿಗೆ ಬೆಂಬಲ ಕೊಟ್ಟಿದ್ದೇವೆ ಎಂಬುದು ಬಿಜೆಪಿಯ ಅಪಪ್ರಚಾರ ಅಷ್ಟೆ, ಹಾಗೆಲ್ಲಾ ಏನು ಇಲ್ಲಾ ಎಂದು ಶಿರಾದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ರಾಜೇಶ್ ಗೌಡ ಅವರು ಗೆದ್ದರೇ ಕ್ಷೇತ್ರಕ್ಕೆ ನ್ಯಾಯ ಒದಗಿಸಲು ಅವರಿಂದ ಸಾಧ್ಯವಿಲ್ಲ, ಏಕೆಂದರೇ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗ ಸರಿಯಾದ ಅರಿವಿಲ್ಲ ಎಂದು ಹೇಳಿದರು.
ರಾಜೇಶ್ ಗೌಡ ಹಾಗೂ ಸತೀಶ್ ಪ್ರಸಾದ್ ಎಂಬುವವರು 2009ರಲ್ಲಿ ಮ್ಯಾಟ್ರಿಕ್ಸ್ ಇಮೆಜಿಂಗ್ ಸಲ್ಯೂಷನ್ ಸ್ಥಾಪಿಸಿದರು. 2014ರಲ್ಲಿ ಡಾ. ಯತೀಂದ್ರ ಅವರನ್ನು ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಸೆಪ್ಟೆಂಬರ್ 19, 2015ರಂದು ಬಿಎಂಆರ್ ಸಿಐನಿಂದ ಕ್ಲಿನಿಕಲ್ ಲ್ಯಾಬೊರೇಟರಿ ಸ್ಥಾಪನೆಗಾಗಿ ಬಿಡ್ಡಿಂಗ್ ಆಹ್ವಾನಿಸಲಾಗಿತ್ತು. ಈ ಬಿಡ್ಡಿಂಗ್ ಸುಲಭವಾಗಿ ಮ್ಯಾಟ್ರಿಕ್ಸ್ ಸಂಸ್ಥೆ ಪಾಲಾಯಿತು. ಆ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಆದಾದ ನಂತರ ತಮ್ಮ ತಂದೆಯ ವರ್ಚಸ್ಸಿಗೆ ಧಕ್ಕೆ ಬರಬಾರದೆಂಬ ಕಾರಣ ನೀಡಿ ಯತೀಂದ್ರ ಆ ನಿರ್ದೇಶಕ ಸ್ಥಾನದಿಂದ ಕೆಳಗಿಳಿದರು.
ಇದನ್ನೂ ಓದಿ: ಶಿರಾದಲ್ಲಿ ದೇವೇಗೌಡ, ಕುಮಾರಸ್ವಾಮಿಯೇ ಸ್ಪರ್ಧಿಸಿದರೂ ಗೆಲವು ಜಯಚಂದ್ರರದ್ದೇ: ಕೆಎನ್ ರಾಜಣ್ಣ