ಹತ್ರಾಸ್ ಅತ್ಯಾಚಾರ: ಜಿಲ್ಲಾಧಿಕಾರಿ ವರ್ಗಾವಣೆಗೆ ಯುಪಿ ಸರ್ಕಾರ ನಕಾರ; ರಾಜಕೀಯ ಆಟ
ಉತ್ತರ ಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಅಮಾನವೀಯ ಕ್ರೌರ್ಯಕ್ಕೆ ತುತ್ತಾದ ದಲಿತ ಯುವತಿಯನ್ನು ತಡರಾತ್ರಿಯೇ ಸುಟ್ಟುಹಾಕಿದ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಪ್ರವೀಣ್ ಕುಮಾರ್ ನೆರವಾಗಿದ್ದಾರೆ. ಅವರ ಮೇಲೆ ಉತ್ತರ ಪ್ರದೇಶ ಸರ್ಕಾರವು ಪ್ರಭಾವ ಬೀರುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
19 ವರ್ಷದ ದಲಿತ ಯುವತಿಯ ಮೃತದೇಹವನ್ನು ಕುಟುಂಬದವರಿಗೂ ನೀಡದೆ, ರಾತ್ರೋರಾತ್ರಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗಿರುವ ಡಿಎಂ ಪ್ರವೀಣ್ ಕುಮಾರ್ ಅವರನ್ನು ಹತ್ರಾಸ್ ಜಿಲ್ಲಾಧಿಕಾರಿಯಾಗಿ ಮುಂದುವರೆಸುವುದು ಸೂಕ್ತವೇ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ನ್ಯಾಯಪೀಠ ಪ್ರಶ್ನಿಸಿದೆ.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್ಜಿ) ಅವರು, ಪ್ರವೀಣ್ ಕುಮಾರ್ ಅವರನ್ನು ವರ್ಗಾವಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸುವುದು ಸರ್ಕಾರದ ಮೇಲಿನ ರಾಜಕೀಯ ಒತ್ತಡ ಹೇರಿದಂತಾಗುತ್ತದೆ. ಅಲ್ಲದೆ, ಜಿಲ್ಲಾಧಿಕಾರಿಯವರ ರಾಜಕೀಯ ವಿಷಯವನ್ನಾಗಿ ಪರಿವರ್ತಿಸುವುದು ರಾಜಕೀಯ ಆಟವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಖಳನಾಯಕ: ಆತ ಮಾಡಿದ್ದೇನು ಗೊತ್ತೇ?
ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹಾಳು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳಿದೆ.
ಕುಟುಂಬದ ಭದ್ರತೆ ಈಗ ಸಿ.ಆರ್.ಪಿ.ಎಫ್ ಅವರ ಕೈಯಲ್ಲಿದೆ. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಇದರಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದು ಎಎಸ್ಜಿ ರಾಜು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ, ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ವು ನಡೆಸುತ್ತಿದೆ ಮತ್ತು ಇದರಲ್ಲಿಯೂ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ರಾತ್ರಿಯಲ್ಲಿ ಸಂತ್ರಸ್ತೆಯ ಅಂತ್ಯಕ್ರಿಯೆ ವಿಷಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸಲು ಎಎಸ್ಜಿ ಪ್ರಯತ್ನಿಸಿದ್ದಾರೆ.
ಪ್ರಕರಣದ ವಿಚಾರಣೆಯಲ್ಲಿ ಡಿಸೆಂಬರ್ 16 ಕ್ಕೆ ಮುಂದೂಡಿದರು.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಯಾವುದೇ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಲಾಗಿದೆಯೇ ಎಂದು ಯುಪಿ ಸರ್ಕಾರವನ್ನು ನ್ಯಾಯಪೀಠ ಕೇಳಿದೆ.
ಇದನ್ನೂ ಓದಿ: ದೆಹಲಿ ಚಲೋ: ವಿಶೇಷ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂಪಯುವಂತೆ ರೈತರ ಒತ್ತಾಯ!