‘ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ’ – ರೈತ ಮುಖಂಡರಲ್ಲಿ ಬಿಎಸ್ವೈ ಮನವಿ..!
ಪ್ರತಿದಿನ ರೈತರ ಪ್ರತಿಭಟನೆಗೆ ಸಿಎಂ ಯಡಿಯೂರಪ್ಪ ಅಸಮಧಾನ ಹೊರಹಾಕಿದ್ದಾರೆ. ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಬಿಎಸ್ವೈ ರೈತ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ಇಂದು ಅನ್ನದಾತರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ರಾಜ್ಯರಾಜಧಾನಿಗೆ ಆಗಮಿಸುತ್ತಿದ್ದಾರೆ. ನಿನ್ನೆ ಭಾರತ್ ಬಂಧ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತ ಪರ ಸಂಘಟನೆಗಳು ಸಾಥ್ ನೀಡಿ ಕರ್ನಾಟಕ ಬಂದ್ ಕೂಡ ಮಾಡಲಾಗಿತ್ತು. ಇಂದು ಕೂಡ ರೈತರು ರಾಜ್ಯದಲ್ಲಿ ರೈತರ ಪ್ರತಿಭಟನೆ ಕಿಚ್ಚು ಹೆಚ್ಚಾಗಿದ್ದು ಬಾರುಕೋಲು ಚಳುವಳಿ ನಡೆಸುತ್ತಿದ್ದಾರೆ. ಬೇರೆ ಬೇರೆ ಮಾರ್ಗವಾಗಿ ರೈತರು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ವಿಧಾನ ಸೌಧ ಮತ್ತು ರಾಜಭವನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎರಡು ಪ್ರತ್ಯೇಕ ಮುತ್ತಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ‘ ರೈತರು ಪ್ರತಿದಿನ ಪ್ರತಿಭಟನೆ ಮಾಡಿದರೆ ಹೇಗೆ..? ನಿನ್ನೆ ಕರ್ನಾಟಕ ಬಂದ್ ಮಾಡಿದ್ದೀರಿ. ಇವತ್ತು ಮತ್ತೆ ಚಳುವಳಿ ಮಾಡಲು ಮುಂದಾಗಿದ್ದೀರಿ. ಬನ್ನಿ ಕುಳಿತುಕೊಂಡು ಮಾತನಾಡೋಣ, ಚರ್ಚಿಸೋಣ. ರಾಜ್ಯ ಸರ್ಕಾರ ರೈತರ ಪರವಾಗಿದೆ. ನಿಮಗಿಂತಲೂ ಹೆಚ್ಚಿನ ಕಾಳಜಿ ನಮಗೆ ರೈತರ ಮೇಲಿದೆ’ ಎಂದು ಯಡಿಯೂರಪ್ಪ ಆಹ್ವಾನಿಸಿದ್ದಾರೆ.