ಬಾದಾನ್ ರೇಪ್ ಕೇಸ್ : ‘ಮಹಿಳೆಯರು ಸಂಜೆ ಒಬ್ಬರೇ ಹೋಗಬಾರದು’ ಎನ್ಸಿಡಬ್ಲ್ಯೂ ಸದಸ್ಯೆ ಹೇಳಿಕೆ ವಿರುದ್ಧ ಆಕ್ರೋಶ!
ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಹೇಳಿಕೆ ಅಚ್ಚರಿ ಮೂಡಿಸಿದೆ.
ಹೌದು.. ಮಹಿಳೆ ಸಂಜೆ ಹೊತ್ತು ತಾನು ಒಬ್ಬಳೇ ಹೋಗದೇ ಇದ್ದರೆ ಆಕೆ ಮೇಲೆ ಅತ್ಯಾಚಾರವಾಗುತ್ತಿರಲಿಲ್ಲ ಎಂದು ಹೇಳಿದ ಮಾತು ಸದ್ಯ ಸಾಕಷ್ಟು ಆಕ್ರೋಶಕ್ಕೆ ಗುರಿ ಮಾಡಿದೆ. ಸಂತ್ರಸ್ತೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಚಂದ್ರಮುಖಿ ದೇವಿ, “ಇದು ಮಾನವೀಯತೆ ನಾಚಿಕೆಪಡಿಸುವಂತ ಅಪರಾಧವಾಗಿದೆ. ಆದರೆ ಮಹಿಳೆಯರು ಜೊತೆಗೆ ಯಾರೂ ಇಲ್ಲದೇ ಏಕಾಂಗಿಯಾಗಿ ಹೊರಹೋಗಬಾರದು ಎಂದು ನಾನು ಹೇಳಲು ಬಯಸುತ್ತೇನೆ. ಮಹಿಳೆ ಸಂಜೆ ಹೊರಗೆ ಕಾಲಿಡದಿದ್ದರೆ ಅಥವಾ ಅವಳ ಮಕ್ಕಳಲ್ಲಿ ಒಬ್ಬರು ಅವಳೊಂದಿಗೆ ಹೋಗಿದ್ದರೆ, ಘಟನೆ ಸಂಭವಿಸುತ್ತಿರಲಿಲ್ಲ” ಎಂದು ಚಂದ್ರಮುಖಿ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.
ಎನ್ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ, “ಸದಸ್ಯರು ಇದನ್ನು ಹೇಗೆ ಮತ್ತು ಏಕೆ ಹೇಳಿದ್ದಾನೆಂದು ನನಗೆ ತಿಳಿದಿಲ್ಲ ಆದರೆ ಮಹಿಳೆಯರಿಗೆ ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಅವರ ಇಚ್ಚೆಯಂತೆ ಮುಂದುವರಿಯುವ ಹಕ್ಕಿದೆ” ಎಂದು ಹೇಳಿದರು.
ಅತ್ಯಾಚಾರ ಘಟನೆ ನಡೆದ ನಾಲ್ಕು ದಿನಗಳ ನಂತರ, ಪ್ರಕರಣದ ಪ್ರಮುಖ ಆರೋಪಿ ಸ್ಥಳೀಯ ದೇವಾಲಯದ ಪಾದ್ರಿ ಸತ್ಯಾನಂದ್ ನನ್ನು ಜಿಲ್ಲೆಯ ಹತ್ತಿರದ ಹಳ್ಳಿಯಿಂದ ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ.
ಆದರೆ ಅತ್ಯಾಚಾರ ಮಾಡಿದ ಆರೋಪಿಗೆ ಶಿಕ್ಷೆ ಬಗ್ಗೆ ಮಾತನಾಡುವ ಬದಲು ಮಹಿಳಾ ಆಯೋಗದ ಸದಸ್ಯೆ ಮಹಿಳೆಯರೇ ಸಂಜೆ ಹೊತ್ತು ಒಬ್ಬರೇ ಹೊರಬರಬಾರದು ಎಂದು ಹೇಳಿದ್ದು ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದೆ.