ಮಂಗಳೂರು ಏರ್ಪೋರ್ಟ್ ನಿರ್ವಹಣೆ ಅದಾನಿಗೆ; ಕೇಂದ್ರದ ನಡೆಗೆ ಕೇಂದ್ರ ಇಲಾಖೆಗಳೇ ಆಕ್ಷೇಪ!
ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ ಒಟ್ಟು ಆರು ಏರ್ಪೋರ್ಟ್ಗಳ ನಿರ್ವಹಣೆಯನ್ನು ಅದಾನಿ ಕಂಪನಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಕೇಂದ್ರ ಹಣಕಾಸು ಇಲಾಖೆ ಹಾಗೂ ನೀತಿ ಆಯೋಗಗಳೇ ವಿರೋಧಿಸಿದ್ದು, ಆಕ್ಷೇಪ ವ್ಯಕ್ತ ಪಡಿಸಿವೆ.
ಏರ್ಪೋರ್ಟ್ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಪ್ರಕ್ರಿಯೆಯಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಇಲಾಖೆಗಳು ಹೇಳಿವೆ.
ಒಂದು ಬಿಡ್ಡಿಂಗ್ ಕಂಪನಿಗೆ ಎರಡಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ನೀಡಬಾರದು ಎಂದು ನಿಯಮವಿದೆ. ಆದರೆ, ಈ ನಿಯಮವನ್ನು ಪಾಲಿಸದೆ ಒಂದೇ ಕಂಪನಿಗೆ 06 ಏರ್ಪೋರ್ಟ್ಗಳನ್ನು ನೀಡಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೆ, ಬಿಡ್ ಪಡೆದುಕೊಂಡಿರುವ ಸಂಸ್ಥೆಯಲ್ಲಿ ಯೋಜನೆಯನ್ನು ಪೂರೈಸಲು ಬೇಕಾದ ತಂತ್ರಜ್ಞಾನಗಳಿಲ್ಲ. ಅಲ್ಲದೇ ಗುಣಮಟ್ಟದ ಸೇವೆಯನ್ನು ನೀಡಲು ಕಂಪನಿಗೆ ಸಾಧ್ಯವಿಲ್ಲ ಎಂದು ನೀತಿ ಆಯೋಗ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: ಕೃಷಿ ಕಾನೂನುಗಳು ಅದಾನಿ ಪರವಾಗಿವೆ; ದಾಖಲೆ ಬಿಡುಗಡೆ ಮಾಡಿದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ!
ಸರ್ಕಾರಿ ಏರ್ಪೋರ್ಟ್ಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದೂವರೆಗೂ ಹಲವಾರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗೀ ಕಂಪನಿಗಳಿಗೆ ನೀಡಲಾಗಿದೆ.
ಅವುಗಳಲ್ಲಿ, ಅಹಮದಾಬಾದ್, ಲಖನೌ, ಮಂಗಳೂರು, ಜೈಪುರ, ಗುವಾಗಟಿ ಹಾಗೂ ತಿರುವನಂತಪುರಂ ಏರ್ಪೋರ್ಟ್ಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ಗೆ ವಹಿಸಲಾಗಿದೆ.
ಬಿಡ್ ಮುಖಾಂತರ ನಿರ್ವಹಕರನ್ನು ಸರ್ಕಾರ ಆಹ್ವಾನಿಸಿತ್ತು. ಸುಮಾರು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅವುಗಳಲ್ಲಿ ಅತ್ಯಂತ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದ್ದ ಗುಜರಾತ್ ಮೂಲದ ಅದಾನಿ ಇನ್ಫ್ರಾ ಗ್ರೂಪ್ಗೆ ಬಿಡ್ ನೀಡಲಾಗಿದ್ದು, ಮುಂದಿನ 50 ವರ್ಷಗಳ ಕಾಲ ಈ ಆರು ವಿಮಾನಗಳ ನಿರ್ವಹಣೆಯನ್ನು ವಹಿಸಲಾಗಿದೆ.
ಅಲ್ಲದೆ, ಈಗಾಗಲೇ ಇದೇ ಕಂಪನಿಗೆ ಕಳೆದ ವರ್ಷ ಮುಂಬೈ ಏರ್ಪೋರ್ಟ್ಅನ್ನು ಕೂಡ ವಹಿಸಲಾಗಿದ್ದು, ಒಟ್ಟ ಏಳು ಏರ್ಪೋರ್ಟ್ಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಇದು ನಿಯಮಗಳ ಉಲ್ಲಂಘನೆ ಎಂದು ಯೋಜನಾ ಆರೋಗ ಹೇಳಿದೆ.
ವಿಮಾನ ನಿಲ್ದಾಣಗಳನ್ನು ಖಾಸಗಿ ಸುಪರ್ದಿಗೆ ನೀಡುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೂ, ಏರ್ಪೋರ್ಟ್ಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?