ಲಸಿಕೆ ವಿರುದ್ದ ಸುಳ್ಳು ಪ್ರಚಾರ- ವೈದ್ಯರ ಮೇಲೆ ಹಲ್ಲೆ; ಮೋದಿ ಮಧ್ಯ ಪ್ರವೇಶಕ್ಕೆ ಐಎಂಎ ಒತ್ತಾಯ!
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ವೈದ್ಯಕೀಯ ಸಿಬ್ಬಂದಿಗಳು ಭಯವಿಲ್ಲದೆ ಕೆಲಸ ಮಾಡಲು ನೆರವು ನೀಡಬೇಕು ಮತ್ತು ಲಸಿಕೆ ವಿತರಣಾ ಅಭಿಯಾನದ ಬಗ್ಗೆ ತಪ್ಪು ಮಾಹಿತಿ ಹರಡುವ ಜನರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
“COVID-19 ಸಾಂಕ್ರಾಮಿಕ ರೋಗದ ವಿರುದ್ಧ ನೀಡಲಾಗುತ್ತಿರುವ ಲಸಿಕೆಯ ವಿತರಣಾ ಅಭಿಯಾನದ ವಿರುದ್ದ ತಪ್ಪು ಮಾಹಿತಿ ಹರಡುವ ಯಾವುದೇ ವ್ಯಕ್ತಿಗಳು ವಿರುದ್ಧ ಭಾರತೀಯ ದಂಡ ಸಂಹಿತೆ 1897 ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ಸಂಬಂಧಿತ ನಿಬಂಧನೆಗಳು ಮತ್ತು ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಐಎಂಎ ತಿಳಿಸಿದೆ.
ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವ ಜನರಿಗೆ ‘ಆರೋಗ್ಯ ಸೇವೆಗಳ ಸಿಬ್ಬಂದಿ (ಹಿಂಸಾಚಾರ ಮತ್ತು ಆಸ್ತಿಗೆ ಹಾನಿ) ಮಸೂದೆ-2019’ರ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಬೇಕು.
ಯಾವುದೇ ಭೀಕರ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಇದರಿಂದಾಗಿ ಯಾವುದೇ ಆರೋಗ್ಯ ರಕ್ಷಣಾ ಸಿಬ್ಬಂದಿ ಮೇಲೆ ಆಕ್ರಮಣ ಮಾಡುವ ಇತರ ಸಾಮಾಜಿಕ ವಿರೋಧಿ ಅಂಶಗಳನ್ನು ಪರಿಣಾಮಕಾರಿಯಾಗಿ ತಡೆಯೊಡ್ಡುತ್ತದೆ ಎಂದು ಐಎಂಎ ಹೇಳಿದೆ.
“COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ವೈದ್ಯರ ತ್ಯಾಗಕ್ಕಾಗಿ ಅವರನ್ನು ಕೋವಿಡ್ ಹುತಾತ್ಮರು ಎಂದು ಗುರುತಿಸಬೇಕಾಗಿದೆ. ಅವರ ಕುಟುಂಬಕ್ಕೆ ಸರ್ಕಾರ ಸರಿಯಾದ ರೀತಿಯಲ್ಲಿ ಬೆಂಬಲ ನೀಡಬೇಕು. ಅಂತಹ ಕುಟುಂಬಗಳ ವಿಮಾ ಸೌಲಭ್ಯಗಳನ್ನು ವಿಸ್ತರಿಸುತ್ತಿರುವ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ ಯೋಜನೆಗೆ ನಾವು ಧನ್ಯವಾದ ಸೂಚಿಸುತ್ತೇವೆ. ಅದಾಗ್ಯೂ, ಕೊವಿಡ್ ಮೊದಲ ಅಲೆಯಲ್ಲಿ ಪ್ರಾಣಕಳೆದುಕೊಂಡ 754 ವೈದ್ಯರಲ್ಲಿ 168 ವೈದ್ಯರ ಕುಟುಂಬಗಳು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಉಳಿದ ವೈದ್ಯರ ಕುಟುಂಬಗಳಿಗೂ ಇದು ಸಾಧ್ಯವಾಗುವಂತೆ ನೆರವು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸಾರ್ವತ್ರಿಕ ಉಚಿತ ಲಸಿಕೆಯನ್ನು ನೀಡಲು ಉತ್ತೇಜಿಸಬೇಕು ಎಂದು ಐಎಂಎ ವಿನಂತಿಸಿದೆ.
ಇದನ್ನೂ ಓದಿ: ಸುಸ್ಥಿರ ಅಭಿವೃದ್ದಿ ಪಟ್ಟಿಯಲ್ಲಿ ಭಾರತಕ್ಕೆ ಭಾರೀ ಕುಸಿತ; ನೇಪಾಳ, ಶ್ರೀಲಂಕಕ್ಕಿಂತ ಹಿಂದೆ ಸರಿದ ಭಾರತ!