ಫ್ಯಾಕ್ಟ್ಚೆಕ್: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನೆ ತಿರುಚಿದ BJP
ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದು ವಿಧಾನ ಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ ಎನ್ನುವ ವಿಡಿಯೋವನ್ನುಸಾಮಾಜಿಕ ಮಾಧ್ಯಮದಲ್ಲಿ BJP ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ? ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ? ಎಂಬ ಹೇಳಿಕೆಯೊಂದಿಗೆ 7 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ.
ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ?
ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ?#ತಲೆಮಾರುದೇಶಮಾರು pic.twitter.com/KSlO33pOxj
— BJP Karnataka (@BJP4Karnataka) July 22, 2022
ಪೋಸ್ಟ್ಕಾರ್ಡ್ ಕನ್ನಡ ಕೂಡ ತನ್ನ ಫೇಸ್ಬುಕ್ ಪೇಜ್ನಿಂದ ರಮೇಶ್ ಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ JDS ನಿಂದ ಬಂದ ರಮೇಶ್ ಕುಮಾರ್ನಂತವರೇ 3-4 ತಲೆಮಾರಿಗಾಗುವಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದರೆ, ಮೂಲತಃ ಕಾಂಗ್ರೆಸ್ ಪಕ್ಷದಲ್ಲೆ ಇರುವ DK ಶಿವಕುಮಾರ್ ನಂತಹ ನಾಯಕರು ಅದೆಷ್ಟು ಸಂಪಾದನೆ ಮಾಡಿರಬಹುದು? ಎಂದು ಪೋಸ್ಟ್ ಹಂಚಿಕೊಂಡಿದೆ.
ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಮಾಡಿದೆ ಎಂಬ ಪ್ರಶ್ನೆಗೆ ರಮೇಶ್ ಕುಮಾರ್ ಅವರ ಭಾಷಣದಿಂದ ಉತ್ತರ ದೊರಕಿದೆ.
ನೆಹರೂ ಕಾಲದಿಂದ ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಟ್ಟಿರುವುದು ಸ್ಪಷ್ಟ.
ಇದು ದೇಶವನ್ನೇ ಮಾರುವಂಥಹ ಅಪರಾಧ!#ತಲೆಮಾರುದೇಶಮಾರು
— BJP Karnataka (@BJP4Karnataka) July 22, 2022
ರಮೇಶ್ ಕುಮಾರ್ ಹೇಳಿಕೆನ್ನು ಸಾಮಾಜಿಕ ಮಾಧ್ಯಮಗಳ ಎಲ್ಲಾ ವಿಭಾಗಗಳಲ್ಲೂ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ಈ ದೇಶವನ್ನು ಲೂಟಿ ಮಾಡಿ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ಮಾಡುತ್ತಿದೆ. BJP ಹಂಚಿಕೊಂಡಿರುವ ರಮೇಶ್ ಕುಮಾರ್ ಅವರ ವಿಡಿಯೊ ಪೋಸ್ಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ರಮೇಶ್ ಕುಮಾರ್ ಹೇಳಿದ್ದೇನು ?
ಜೂನ್ 21ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಇಡಿ ಕಚೇರಿಯಲ್ಲಿ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ದೇಶಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ರಾಜಭವನದವರೆಗೆ ರಾಜಭವನ ಚಲೋವನ್ನು ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದರು.
ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಟ್ಟಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ, ಈ ಕಿಂಚಿತ್ ತ್ಯಾಗಕ್ಕೆ ತಯಾರಾಗದೆ ಹೋದ್ರೆ ನಾವು ಇನ್ನಮುಂದೆ ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ ಎಂದು ಹೇಳಿದ್ದಾರೆ ಅದೇ ವಿಡಿಯೊ ತುಣುಕನ್ನು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದೆ.
BJP ಯವರಿಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು! ಮಾತು ತಿರುಚುವುದು ಅವರ ಹುಟ್ಟುಗುಣ. ರಮೇಶ್ ಕುಮಾರ್ರವರು ಹೇಳಿದಂತೆ ನೆಹರು ಕುಟುಂಬ ದೇಶಕ್ಕಾಗಿ ವೈಜ್ಞಾನಿಕ ಮನೋಭಾವದ, ಶಿಕ್ಷಣ -ಆರ್ಥಿಕ ಸಮಾನತೆಯ ನೀತಿಗಳು, ಸಮಾಜದಲ್ಲಿ ಸ್ವಾಭಿಮಾನದ ಬದುಕಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ಬಿಜೆಪಿಯ ಕೊಡುಗೆ – 40%ಲೂಟಿ ಮಾತ್ರ. ಎಂದು ತಿರುಗೇಟು ನೀಡಿದೆ.
'@BJP4Karnatakaಯವರಿಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು!
ಮಾತು ತಿರುಚುವುದು ಅವರ ಹುಟ್ಟುಗುಣ.ರಮೇಶ್ ಕುಮಾರ್ರವರು ಹೇಳಿದಂತೆ ನೆಹರು ಕುಟುಂಬ ದೇಶಕ್ಕಾಗಿ
>ವೈಜ್ಞಾನಿಕ ಮನೋಭಾವದ ಶಿಕ್ಷಣ
>ಆರ್ಥಿಕ ಸಮಾನತೆಯ ನೀತಿಗಳು
>ಸಮಾಜದಲ್ಲಿ ಸ್ವಾಭಿಮಾನದ ಬದುಕಿನ ವ್ಯವಸ್ಥೆ
ಮಾಡಿಕೊಟ್ಟಿದ್ದಾರೆ.ಬಿಜೆಪಿಯ ಕೊಡುಗೆ – 40%ಲೂಟಿ ಮಾತ್ರ. pic.twitter.com/dDpVudHdlP
— Karnataka Congress (@INCKarnataka) July 22, 2022
ಮುಂದುವರೆದು ಮಾಜಿ ಸಿಎಂ ವೀರಪ್ಪ ಮೋಯ್ಲಿ ರಮೇಶ್ ಕುಮಾರ್ ಹೇಳಿಕೆಯನ್ನು ವಿವರಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈಗಾಗಲೇ ರಮೇಶ್ ಕುಮಾರ್ ಅವರೇ ತಮ್ಮ ಹೇಳಿಕೆ ಕುರಿತು ಸ್ಪಷ್ಟಿಕರಣ ಕೊಟ್ಟಿದ್ದಾರೆ. ಅವರು ಹೇಳಿದ್ದು ಕಾಂಗ್ರೆಸ್ಸಿಗರಿಗೆ ಅಲ್ಲ. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯ ಫಲವನ್ನ ಅನುಭವಿಸಿದ್ದ ದೇಶದ ಜನರಿಗೆ ಎಂದು ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಾಗಾಗಿ ರಮೇಶ್ ಕುಮಾರ್ ಅವರು 3-4ತಲೆಮಾರುಗಳಿಗಾಗುವಷ್ಟು ಮಾಡಿಕೊಟ್ಟಿದ್ದೇವೆ ಎಂದಿರುವ ಹೇಳಿಕೆಯನ್ನು ತಿರುಚಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ ಎಂದು BJPಯು ವಿಡಿಯೊವನ್ನು ವೈರಲ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಆದರೆ ಇಲ್ಲಿ ಆಪಾದನೆ ಮತ್ತು ಪ್ರತಿಪಾದನೆ ಮಾಡುತ್ತಿರುವ ಎರಡೂ ಪಕ್ಷಗಳಲ್ಲಿಯೂ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಜನ ಪ್ರತಿನಿಧಿಗಳು ಇದ್ದಾರೆ ಎಂದು ಪ್ರಜೆಗಳು ಹೇಳುತ್ತಿದ್ದಾರೆ. ಹಾಗಾಗಿ ಇನ್ನು ಮುಂದಾದರೂ ಆಸ್ತಿ ಮಾಡಿಕೊಳ್ಳುವುದನ್ನು ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಿ ಎನ್ನುವುದು ನಾಡಿನ ಜನರ ಒತ್ತಾಯ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಸಾಯಿಬಾಬಾ ಪರ್ವತ ಇರುವುದು ನಿಜವೇ ? ಹಾಗಿದ್ದರೆ ಇದು ಎಲ್ಲಿದೆ?