ಫ್ಯಾಕ್ಟ್ಚೆಕ್ : ಕೇದಾರನಾಥ ಹಿಂದೂ ಯಾತ್ರಿಗಳ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಮರಲ್ಲ! ಮತ್ತ್ಯಾರು?
ಉತ್ತರಾಖಂಡದ ಕೇದಾರನಾಥ ಯಾತ್ರಿಕರ ಮೇಲೆ ಕುದುರೆಯ ಸೇವೆ ಒದಗಿಸುವ ಮುಸ್ಲಿಮರು ಹಲ್ಲೆ ಮಾಡುತ್ತಿರುವ ದೃಶ್ಯಗಳು ಎಂದು ಹೇಳುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಮರು ಕುದುರೆ ಸವಾರಿ ಸೇವೆಗಳು ಮತ್ತು ಇತರ ವ್ಯವಹಾರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಮತ್ತು ಹಿಂದೂ ಯಾತ್ರಿಕರ ಮೇಲೆ ಮತ್ತಷ್ಟು ಆಕ್ರಮಣ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಹಿಂದೂ ಯಾತ್ರಿಕರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕುದುರಿ ಸವಾರಿ ನೀಡುವ ಸಿಬ್ಬಂದಿಗಳು ಮತ್ತೊಂದು ಸಮುದಾಯಕ್ಕೆ ಸೇರಿದವರು. ಹೀಗಾಗಿ ಕೋಮುಸಂಘರ್ಷ ನಡೆದಿದೆ. ತಕ್ಷಣವೇ ಉತ್ತರಖಂಡ ಸರ್ಕಾರ ಕುದುರೆ ಸೇವೆ ನೀಡುವ ಸಿಬ್ಬಂದಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅನ್ಯ ಸಮುದಾಯಕ್ಕೆ ಹಿಂದೂ ಪವಿತ್ರಕ್ಷೇತ್ರದ ಗಾಂಭೀರ್ಯತೆ ಹಾಗೂ ಶ್ರದ್ಧೆ ಅರ್ಥವಾಗುವುದಿಲ್ಲ. ಹೀಗಾಗಿ ಕೆಲಸದಿಂದ ವಜಾಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 13 ಜೂನ್ 2023 ರಂದು ‘ದೇವಭೂಮಿ ಡೈಲಾಗ್’ ಸುದ್ದಿ ಸೈಟ್ ಪ್ರಕಟಿಸಿದ ಲೇಖನದಲ್ಲಿ ವೀಡಿಯೊದ ಕೆಲವು ಸ್ಕ್ರೀನ್ಗ್ರಾಬ್ಗಳು ಕಂಡುಬಂದಿವೆ. ಕೇದಾರನಾಥ ಧಾಮ ಯಾತ್ರಿಕರ ಮೇಲೆ ಹಲ್ಲೆ ನಡೆಸಿದ ನಾಲ್ಕು ಕುದುರೆ ನಿರ್ವಾಹಕರನ್ನು ಬಂಧಿಸಿ ರುದ್ರಪ್ರಯಾಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಈ ಸುದ್ದಿ ಸೈಟ್ ವರದಿ ಮಾಡಿದೆ.
ಕೇದಾರನಾಥ ಯಾತ್ರೆಗೆ ಬಂದಿದ್ದ ಜೋಡಿ ಮೇಲೆ, ಯಾತ್ರಿಕರಿಗೆ ಸೇವೆ ನೀಡುವ ಕುದರೆ ಸವಾರಿ ಸಿಬ್ಬಂದಿಗಳೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಹಲ್ಲೆಕೋರರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಯುವತಿ ಸೇರಿ ಕೆಲ ಯಾತ್ರಿಕರ ಮೇಲೆ ತೀವ್ರ ದಾಳಿ ನಡೆಸಲಾಗಿದೆ. ಬಡಿಗೆ, ಕೋಲುಗಳಿಂದ ದಾಳಿ ನಡೆದಿತ್ತು ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
केदारनाथ धाम पैदल मार्ग पर श्रद्धालुओं के साथ मारपीट करने वाले घोड़ा खच्चर संचालकों के विरुद्ध कोतवाली सोनप्रयाग पर हुआ मुकदमा हुआ दर्ज।#UKPoliceStrikeOnCrime #SurakshitCharDham #RudraprayagPolice #UttarakhandPolice pic.twitter.com/7j9LHFqeib
— Rudraprayag Police Uttarakhand (@RudraprayagPol) June 13, 2023
ಭೀಮ್ ಬಾಲಿ ಸೇತುವೆ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಕುದುರೆ ನಿರ್ವಾಹಕರು ಮುಸ್ಲಿಮರಲ್ಲ. ಕೇದಾರನಾಥ ಧಾಮ ಪಾದಚಾರಿ ಮಾರ್ಗದಲ್ಲಿ ಯಾತ್ರಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರುದ್ರಪ್ರಯಾಗ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದು, ಮತ್ತೊಂದು ಟ್ವೀಟ್ನಲ್ಲಿ ಅಂಕಿತ್ ಸಿಂಗ್, ಸಂತೋಷ್ ಕುಮಾರ್, ರೋಹಿತ್ ಕುಮಾರ್ ಮತ್ತು ಗೌತಮ್ ಆರೋಪಿಗಳ ಹೆಸರುಗಳನ್ನು ತಿಳಿಸಿದ್ದಾರೆ. ಈ ನಾಲ್ಕು ಜನರಲ್ಲಿ ಯಾರೂ ಕೂಡ ಮುಸ್ಲಿಮರಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಕೇದಾರನಾಥ ಯಾತ್ರಿಗಳ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳು ಮುಸ್ಲಿಮರಲ್ಲ. ಅವರೆಲ್ಲ ಹಿಂದೂ ಸಮುದಾಯಕ್ಕೆ ಸೇರಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಬೀಚ್ನಲ್ಲಿ ಹೀಗೆ ನೃತ್ಯ ಮಾಡುತ್ತಿರುವ ವ್ಯಕ್ತಿ ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅಲ್ಲ