ಫ್ಯಾಕ್ಟ್ಚೆಕ್ : ಹಿಂದೂಗಳನ್ನು ಟಾರ್ಗೆಟ್ ಮಾಡಿ ಏಡ್ಸ್ ಇಂಜೆಕ್ಷನ್ ನೀಡಲಾಗುತ್ತಿದೆಯೇ?
ಗದಗ ಜಿಲ್ಲಾ ಪೊಲೀಸ್ ಪ್ರಕಟಣೆಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್ ಗ್ರೂಪ್ಗಳಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ.
ಗದಗ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಹರಿದಾಡುತ್ತಿದ್ದ ಸಂದೇಶ ಇಂತಿದೆ: ‘ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಮಿನ್ ಇಂಜೆಕ್ಷನ್ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್ ಮಾಡಿಸಿಕೊಳ್ಳದಿರಿ. ಜಿಹಾದಿ, ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್ಗಳಿಗೆ ಕಳಿಸಿ, ಅಮಾಯಕರ ಪ್ರಾಣ ಉಳಿಸಿ’. ಇಂತಿ ನಿಮ್ಮ ಸೋಮೇಶ್. ಗಜೆ.(SI) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.
ಹಲವು ಸಾಮಾಜಿ ಮಾಧ್ಯಮಗಳ ಬಳಕೆದಾರರು ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಏಸ್ಸುದ್ದಿ.ಕಾಂಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಸಂದೇಶದಲ್ಲಿ ಪ್ರಸ್ತಾಪಿಸಿರುವಂತೆ ಗದಗ ಜಿಲ್ಲಾ ಪೊಲೀಸ್ ಅಧೀಕಾರಿಗಳು ಇಂತದೊಂದು ಪ್ರಕಟಣೆ ಹೊರಡಿಸಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಗದಗ ಜಿಲ್ಲ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾದ ಸಂದೇಶಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗದಗ ಜಿಲ್ಲಾ ಪೊಲೀಸ್ ಫೇಸ್ಬುಕ್ ಪೇಜ್ನಲ್ಲಿ ಸರ್ಚ್ ಮಾಡಿದಾಗ ಪ್ರಕಟಣಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ಗಳು ಕಂಡುಬಂದಿಲ್ಲ.
ನಂತರ ನೇರವಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ಕರೆ ಮಾಡಿ ವೈರಲ್ ಸಂದೇಶದ ಬಗ್ಗೆ ಮಾತನಾಡಿದಾಗ ಇದೊಂದು ನಕಲಿ ಸಂದೇಶ ಇದರಿಂದ ನಾಗರೀಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸಷ್ಟಪಡಿಸಿದ್ದಾರೆ.
‘ಇದೊಂದು ಫೇಕ್ ಸಂದೇಶವಾಗಿದ್ದು, ಜನರು ಭಯಪಡಬಾರದು. ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಹ ಸಂದೇಶ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕಲಿ ಸಂದೇಶದ ಮೂಲ ಪತ್ತೆ ಹಚ್ಚಲು ಸೈಬರ್ ವಿಭಾಗದ ಪೊಲೀಸರಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.
ಅಲ್ಲದೆ ಈ ಸಂದೇಶ ಕೆಲವು ವರ್ಷಗಳ ಹಿಂದೆ ಇದೇ ರೀತಿ ವಾಟ್ಸಾಪ್ಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದನ್ನು ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ದ್ವೇಷ ಹರಡುವ ಉದ್ದೇಶದಿಂದ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಪೋಸ್ಟ್ನಲ್ಲಿಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಜ್ಞಾನವಾಪಿ ಮಸೀದಿ ಸರ್ವೆ ನಡೆಸುವಾಗ ಸಾವಿರ ಅಡಿ ಶಿವಲಿಂಗ ಪತ್ತೆಯಾಗಿದ್ದು ನಿಜವೇ?