ಇಂದು ಮುಂಜಾನೆ 12.57ಕ್ಕೆ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ
ತಂಪಾದ ಹವಾಗುಣ, ವೇದ ಮಂತ್ರ, ಸಹಸ್ರಾರು ಭಕ್ತಾದಿಗಳ ಜಯ ಘೋಷದ ನಡುವೆ ದಕ್ಷಿಣ ಕಾಶಿ ತಲಕಾವೇರಿಯಲ್ಲಿ ಜೀವನದಿ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದಳು. ಸಹಸ್ರಾರು ಭಕ್ತರು ಸಾಕ್ಷಿಯಾದ ಈ ಅಭೂತಪೂರ್ವ ಕ್ಷಣವು ನಿಗದಿತ ಅವಧಿಗಿಂತ ಎರಡು ನಿಮಿಷ ಮೊದಲೇ ನಡೆಯಿತು.
ತೀರ್ಥೋದ್ಭವಕ್ಕೆ ಸಾಕ್ಷಿಯಾಗಲು ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಬಂದಿದ್ದರು. ಬಿಬಿಎಂಪಿ ಮೇಯರ್ ಗೌತಮ್ ಕುಮಾರ ಜೈನ್, ಶಾಸಕರಾದ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೇಯರ್ ಗೌತಮ್ ಕುಮಾರ್ ಜೈನ್ ಅವರು ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳ ನೆರವನ್ನು ಪಾಲಿಕೆಯಿಂದ ನೀಡುವುದಾಗಿ ಭರವಸೆ ನೀಡಿದರು. ತೀರ್ಥೋದ್ಭವದಿಂದ ಒಂದು ತಿಂಗಳ ಕಾಲ ಇಲ್ಲಿ ಪುಣ್ಯ ಸ್ನಾನ ಮಾಡಲು ಸಾವಿರಾರು ಭಕ್ತರು ಆಗಮಿಸಲಿದ್ದಾರೆ.