ಕೊರೊನ ತೊಲಗಿಸಲು ಭಕ್ತರ ಕೈ ಚುಂಬಿಸುತ್ತಿದ್ದ ಬಾಬಾ ಸಾವು: 24 ಜನರಿಗೆ ಸೋಂಕು
ಕೊರೊನಾ ಓಡಿಸಲು ಭಕ್ತರ ಕೈ ಚುಂಬಿಸುತ್ತಿದ್ದ ಬಾಬಾ ಒಬ್ಬರು ವೈರಸ್ ಗೆ ಬಲಿಯಾದ ಘಟನೆ ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ನಡೆದಿದೆ.
ವೇಗವಾಗಿ ಹರಡುತ್ತಿರುವ ಕೊರೊನಾ ತೊಲಗಿಸಲು ಲಾಕ್ ಡೌನ್ ನಡುವೆಯೂ ಭಕ್ತರಿಗೆ ಅಭಯ ನೀಡಿ ಕೈ ಚುಂಬಿಸುತ್ತಿದ್ದ ಬಾಬಾ ಒಬ್ಬರು ಕೊರೊನಾ ವೈರಸ್ ಗೇ ಬಲಿಯಾಗಿದ್ದಾರೆ. ಭಕ್ತರ ಜೀವ ಉಳಿಸುವ ಅಭಯ ನೀಡಿ ತಮ್ಮ ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ. ಮಾತ್ರವಲ್ಲದೇ ಭಕ್ತರಿಗೂ ಅವರಿಂದ ಕೊರೊನಾ ಸೋಂಕು ಹರಡಿದೆ.
ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ, ‘ಬಾಬಾ’ ಭಕ್ತರ ಕೈಗೆ ಮುತ್ತಿಡುತ್ತಿದ್ದ ಪರಿಣಾಮ ಅನೇಕ ಜನರಿಗೆ ಸೋಂಕು ತಗುಲಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈವರೆಗೆ ರತ್ಲಮ್ ಜಿಲ್ಲೆಯಲ್ಲಿ 85 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 19 ಮಂದಿ ನಾಯಪುರ ಪ್ರದೇಶದ ‘ಬಾಬಾ’ ಸಂಪರ್ಕಕ್ಕೆ ಬಂದಿದ್ದಾರೆ.
‘ಬಾಬಾ’ ಭಕ್ತರ ಕೈಗಳಿಗೆ ಮುತ್ತಿಡುವ ಮೂಲಕ ಮಾಟಮಂತ್ರದಿಂದ ಚಿಕಿತ್ಸೆ ನೀಡುತ್ತಿದ್ದರು. ಹೀಗಾಗಿ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಬಾಬಾ ಕೊರೋನವೈರಸ್ ನಿಂದಾಗಿ ಜೂನ್ 4 ರಂದು ನಿಧನರಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತನೊಂದಿಗೆ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ 13 ಜನರು ನಾಯಪುರ ನಿವಾಸಿಗಳಾಗಿದ್ದಾರೆ.
ನೋಡಲ್ ಅಧಿಕಾರಿ ಡಾ.ಪ್ರಮೋದ್ ಪ್ರಜಾಪತಿ ಅವರು ‘ಬಾಬಾ’ ಸಂಪರ್ಕದಲ್ಲಿದ್ದ 24 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 46 ಸಕ್ರಿಯ ರೋಗಿಗಳಿದ್ದು, ಈವರೆಗೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ.