ಜಾತಿ ಗಣತಿ ವರದಿ – ಜಾತಿ ಉಪಜಾತಿ ನಡುವೆ ಬೆಂಕಿ ಹಚ್ಚಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಸಚಿವರು ಗರಂ
ಜಾತಿ ಜನಗಣತಿ ಮಾಡಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೆವು. ಸಿದ್ದರಾಮಯ್ಯ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಜಾತಿ ಉಪಜಾತಿ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ವಿರುದ್ಧ ಹರಿಯಾಯ್ದಿದ್ದಾರೆ.
ರಾಜಕೀಯ ಉದ್ದೇಶಕ್ಕಾಗಿ ಜಾತಿಗಣತಿ ಮಾಡಿಸಿದ್ದಾರೆ. ವರದಿಯನ್ನು ಮಂಡನೆಯೂ ಮಾಡಿಲ್ಲ, ತಿರಸ್ಕಾರವೂ ಮಾಡಿಲ್ಲ. 190 ಕೋಟಿ ಹಣವನ್ನು ನೀರಲ್ಲಿ ಹಾಕಿದ್ದಾರೆ. ಅಂದಾದುಂದಿ ಸರ್ಕಾರ ಮಾಡಿದ್ದಕ್ಕೆ ಸಿದ್ದರಾಮಯ್ಯ ನವರನ್ನು ಜನರು ಮನೆಗೆ ಕಳಿಸಿದ್ದಾರೆ. ಜಾತಿ ಜನಗಣತಿಗೆ ನಾವು ಹಿಂದೆಯೂ ವಿರೋಧ ಮಾಡಿದ್ದೆವು. ವರದಿ ತಿರಸ್ಕರಿಸುವ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿಟಿ ರವಿ, ಆ ವರದಿಯನ್ನ ಆ ಸರ್ಕಾರವೇ ಮಂಡನೆ ಮಾಡಲಿಲ್ಲ. ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ತಯಾರಿಸಿದರು. ಮೂರು ವರ್ಷ ಎಲ್ಲಿತ್ತು ಅಂತ ನೋಡಬೇಕು. ಮೂರು ವರ್ಷ ಅದನ್ನ ಡಸ್ಟ್ ಬಿನ್ ಕೆಳಗಿಟ್ಟಿದ್ರು. ಅವರೇ ತಯಾರಿಸದ ವರದಿ ಮೇಲೆ ಅವರಿಗೆ ವಿಶ್ವಾಸವಿರಲಿಲ್ಲ. ಇನ್ನೊಂದು ಸರ್ಕಾರದ ಬಗ್ಗೆ ನಿರೀಕ್ಷೆ ಮಾಡೋದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.