ದೇಶಕ್ಕೆ 18 ಲಕ್ಷ ಕೋಟಿ ನಷ್ಟವಾಗಿದೆ; ಸರ್ಕಾರ ನಡೆಸಲಾಗದಿದ್ದರೆ ರಾಜೀನಾಮೆ ಕೊಡಿ: ಸಿದ್ದರಾಮಯ್ಯ
ದೇಶದ ಜಿಡಿಪಿ ದರ ಗಣನೀಯವಾಗಿ ಕುಸಿದಿದೆ. ಮುಂದಿನ ಮೂರು ತಿಂಗಳಲ್ಲಿಯೂ ಇನ್ನೂ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಈಗಾಗಲೇ 18 ಲಕ್ಷ ಕೋಟಿ ನಷ್ಟವಾಗಿದೆ. ಆರ್ಥಿಕ ಕುಸಿತದ ಜೊತೆಗೆ ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿನ ಜಿಡಿಪಿ ಕುಸಿತಕ್ಕೆ, ಆರ್ಥಿಕತೆ ಅಧೋಗತಿಗೆ ನರೇಂದ್ರ ಮೋದಿ ಸರ್ಕಾರವೇ ಕಾರಣವಾಗಿದೆ. ಇಷ್ಟೊಂದು ಕೆಳಮಟ್ಟಕ್ಕೆ ಜಿಡಿಪಿ ಹಿಂದೆಂದೂ ಇಳಿದಿರಲಿಲ್ಲ. ಒಟ್ಟು ಶೇ 23 ಜಿಡಿಪಿ ಕುಸಿದಿದ್ದು, 18 ಲಕ್ಷ ಕೋಟಿ ರೂ ನಷ್ಟವಾಗಿದೆ. 15 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಶಿಕ್ಷಕರಿಗೆ ಸಂಬಳ ಕೊಡುತ್ತಿಲ್ಲ. ಶಿಕ್ಷಣ ಸಮೂಹ ತೀವ್ರ ಸಮಸ್ಯೆಯಲ್ಲಿದೆ. ಕೇಂದ್ರ ಸರ್ಕಾರ ಎಲ್ಪಿಜಿ ಮೇಲಿನ ಸಬ್ಸಿಡಿ ರದ್ಧು ಮಾಡಿದೆ. ಕೇಂದ್ರ ಸರ್ಕಾರದ ಧೋರಣೆಯಿಂದ ರಾಜ್ಯಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಕಡಿತವಾಗಿದ್ದು, ಬಿಜೆಪಿ ನಾಯಕರು ಮೌನವಾಗಿದ್ದಾರೆ. ಅವರಿಗೆ ಸರ್ಕಾರವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಡ್ರಗ್ಸ್ ಎಲ್ಲಾ ಕಾಲದಲ್ಲಿಯೂ ಇತ್ತು. ನಮ್ಮ ಸರ್ಕಾರವೂ ಅದನ್ನು ಮಟ್ಟ ಹಾಕಲು ಪ್ರಯತ್ನಿಸಿತ್ತು. ಈಗ ಯಡಿಯೂರಪ್ಪ ಆಡಳಿತದಲ್ಲಿ ಇದು ಬಯಲಾಗಿದೆ. ತಪ್ಪಿತಸ್ಥರು ಯಾರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಡ್ರಗ್ಸ್ ಮಾಫಿಯಾ ತಡೆಗೆ ರಾಜ್ಯ ಸರ್ಕಾರದಿಂದ ಪ್ರಬಲ ಕಾನೂನು ಜಾರಿಯಾಗಬೇಕು. ನಾನೂ ಇದಕ್ಕೆ ಬೆಂಬಲ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಒಂದು ತೆಂಗಿನಕಾಯಿಯಿಂದ 20ಕ್ಕೂ ಹೆಚ್ಚು ಸಸಿಗಳ ಬೆಳೆ: ತಮಿಳುನಾಡು ಕೃಷಿ ವಿವಿ ಆವಿಷ್ಕಾರ