ತುಬಚಿ-ಬಬಲೇಶ್ವರ ನನ್ನ ಕೂಸು, ಅದರ ತಾಯಿಯೂ ನಾನೇ, ತಂದೆಯೂ ನಾನೇ- ಸಿಎಂ, ಡಿಸಿಎಂಗೆ ಎಂ. ಬಿ. ಪಾಟೀಲ ಟಾಂಗ್
ತುಬಚಿ-ಬಬಲೇಶ್ವರ ಯೋಜನೆ ನನ್ನ ಕೂಸು. ಈ ಯೋಜನೆಯ ತಾಯಿಯೂ ನಾನೇ, ತಂದೆಯೂ ನಾನೇ. ರೂ. 3600 ಕೋ. ವೆಚ್ಚದ ಯೋಜನೆ ಅದು ಎಂದು ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನಲ್ಲಿ ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ವಿಕ್ರಂ ಸಾವಂತ ಪರ ಪ್ರಚಾರ ಸಭೆಯಲ್ಲಿ ಅವರ ಮಾತನಾಡಿದರು.
ಸಿಎಂ ಬಿ. ಎಸ್. ಯಡಿಯೂರಪ್ಪ ನಿನ್ನೆ ಇದೇ ಜತ್ ಮತಕ್ಷೇತ್ರದ ಸಂಖ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಜಗತಾಪ್ ಪರ ಪ್ರಚಾರ ನಡೆಸಿದ್ದರು. ಅಲ್ಲದೇ, ಜತ್ ಭಾಗದಲ್ಲಿ ಕನ್ನಡಿಗರೇ ಬಹುಸಂಖ್ಯಾತರಾಗಿರುವ ಹಿನ್ನೆಲೆಯಲ್ಲಿ ಈ ಭಾಗದ 40 ಹಳ್ಳಿಗಳಿಗೆ ಅನುಕೂಲವಾಗಲು ಕರ್ನಾಟಕದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ನೀರು ಪೂರೈಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಅದೇ ಜತ್ ಮತಕ್ಷೇತ್ರದ ಉಮರಾಣಿಯಲ್ಲಿ ಮಾತನಾಡಿದ ಅವರು, ತುಬಚಿ ಬಬಲೇಶ್ವರ ಯೋಜನೆ ತಮ್ಮ ಕೂಸು. ಈ ಯೋಜನೆ ಈಗ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನೆನಪಾಗಿದೆ. ಈಗ ಮಹಾರಾಷ್ಟ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಲಕ್ಷ್ಮಣ ಸವದಿ ಈ ಯೋಜನೆ ಬಗ್ಗೆ ಪ್ರಸ್ತಾಪಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆಯ ಬಗ್ಗೆ ತಾವು ಅಂದು ಜಲಸಂಪನ್ಮೂಲ ಸಚಿವರಾಗಿದ್ದಾಗ ಅಂದಿನ ಸಚಿವ ಸಂಪುಟದಲ್ಲಿ ಇಂಧನ ಸಚಿವ ಡಿ. ಕೆ. ಶಿವಕುಮಾರ ಇದರ ಬಗ್ಗೆ ಸಿಎಂಗೆ ದೂರಿದ್ದರು. ಆಗ ನಾನು ನನ್ನ ಮತಕ್ಶೇತ್ರದ ಮೂರು ಹೋಬಳಿಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ಹೇಳಿ ಸಮರ್ಥಿಸಿಕೊಂಡಿದ್ದೆ. ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಸಿಎಂ, ಡಿಸಿಎಂ ಗೆ ತುಬಚಿ ಬಬಲೇಶ್ವರ ಯೋಜನೆ ನೆನೆಪಾಗಿದೆ ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.
ಇದೇ ಪ್ರಚಾರ ಸಭೆಯಲ್ಲಿ ಬಿ. ಎಸ್. ಯಡಿಯೂರಪ್ಪ ನಿನ್ನೆ ಮಹಾರಾಷ್ಟ್ರದ ಸಂಖ್ ದಲ್ಲಿ ಮಾಡಿದ ಭಾಷಣದ ವಿಡಿಯೋ ತುಣಕನ್ನು ತೋರಿಸುವ ಮೂಲಕ ಎಂ. ಬಿ. ಪಾಟೀಲ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.