ಆನಂದ್ ತೇಲ್ತುಂಬ್ಡೆಯವರ ಜಾಮೀನು ಅರ್ಜಿ ತಿರಸ್ಕರಿಸಿದ ಪುಣೆ ಕೋರ್ಟ್
ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ ಆನಂದ್ ತೇಲ್ತುಂಬ್ಡೆ ಅವರಿಗೆ ತಾತ್ಕಾಲಿಕ ಜಾಮೀನು ನೀಡಲು ಪುಣೆಯ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಜೊತೆಗೆ ಮೇ 8ರವರೆಗೆ ತೇಲ್ತುಂಬೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸೆಂಬರ್ 31, 2017ರಂದ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ ಆಗಿರುವ ಆನಂದ್ ತೇಲ್ತುಂಬೆ ಅವರು ಏಪ್ರಿಲ್ 14ರ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಶರಣರಾಗಿದ್ದರು.
ಈ ಹಿನ್ನೆಲೆಯಲ್ಲಿ ತೇಲ್ತುಂಬ್ಡೆ ಅವರು ತಮ್ಮ ವಕೀಲರಾದ ಆರ್. ಸತ್ಯನಾರಾಯಣ್ ಮತ್ತು ಆರೀಫ್ ಸಿದ್ದಿಕಿ ಮೂಲಕ ವಿಶೇಷ ನ್ಯಾಯಾಲಯಕ್ಕೆ ತಾತ್ಕಾಲಿಕ ಜಾಮೀನು ನೀಡುವಂತೆ ಕೋರಿದ್ದರು. ತೇಲ್ತುಂಬೆ ಅವರಿಗೆ ಅನಾರೋಗ್ಯದಲ್ಲಿ ಏರುಪೇರಾಗಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ ಆನಂದ್ರವರ ಅವರ ಅರ್ಜಿಯನ್ನು ವಿರೋಧಿಸಿದ್ದಲ್ಲದೆ, ಈ ಪ್ರಕರಣ ತುಂಬಾ ಗಂಭೀರವಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ ತನಿಖೆಗೆ ಅಗತ್ಯವಿರುವುದರಿಂದ ಜಾಮೀನು ನೀಡಬಾರದೆಂದು ಮನವಿ ಮಾಡಿದೆ.
ಈ ವೇಳೆ ಆನಂದ್ ಪರ ವಾದ ಮಂಡಿಸಿದ ವಕೀಲರು ತಮ್ಮ ಕ್ಷಕ್ಷಿದಾರರಿಗೆ ಉಸಿರಾಟದ ತೊಂದರೆ ಇದೆ. ಉಸಿರಾಟ ಕಡಿಮೆಯಾಗಿದೆ. ಕೋವಿಡ್-19 ವ್ಯಾಪಿಸಿರುವುದರಿಂದ ಉಸಿರಾಟದ ತೊಂದರೆಯಾದರೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ತಪಾಸಣೆ ಅಗತ್ಯ. ಹಾಗಾಗಿ ತೇಲ್ತುಂಬ್ಡೆ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಎರಡು ಕಡೆಯ ವಾದ-ವಿವಾದ ಆಲಿಸಿದ ವಿಶೇಷ ನ್ಯಾಯಾಲಯ ತೇಲ್ತುಂಬ್ಡೆ ಅವರ ತಾತ್ಕಾಲಿಕ ಜಾಮೀನು ಅರ್ಜಿಯನ್ನು ನಿರಾಕರಿಸಿತು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ತೇಲ್ತುಂಬೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾಗಿದ್ದರು. ಸುಪ್ರೀಂಕೋರ್ಟ್ ಕೂಡ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿತ್ತು.