ಇಂದು ಸಿಎಂಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್ : ಲಾಕ್ಡೌನ್ ಬಗ್ಗೆ ಮಹತ್ವದ ಚರ್ಚೆ
ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ.
ಕೊರೊನಾ ಸಂಬಂಧ ಮೋದಿಯವರು ಮೂರನೇ ಬಾರಿ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದು, ಇಂದು ಸಂಜೆಯ ವೇಳೆ ಮೇ 3ರ ನಂತರ ಲಾಕ್ಡೌನ್ ಇರುತ್ತಾ ಇಲ್ಲವೋ ಎನ್ನುವ ಬಗ್ಗೆ ಚಿತ್ರಣ ಸಿಗುವ ಸಾಧ್ಯತೆಯಿದೆ.
ಕೊರೋನಾ ವೈರಸ್ ತಹಬದಿಗೆ ಬಾರದ ಕಾರಣ ಲಾಕ್ಡೌನ್ ಎರಡನೇ ಅವಧಿಗೆ ಮೇ 3ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಹೀಗಿದ್ದರೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27 ಸಾವಿರಕ್ಕೆ ಸಮೀಪಿಸಿದೆ. ಆದ್ದರಿಂದ ಮೇ 3ನೇ ತಾರೀಕಿನ ಬಳಿಕ ಲಾಕ್ಡೌನ್ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಇಂದು ಕೇವಲ 9 ರಾಜ್ಯಗಳ ಸಿಎಂ ಜೊತೆ ಮಾತ್ರ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ರೆಡ್ ಝೋನ್ ಹೊರತುಪಡಿಸಿ ಉಳಿದ ಕಡೆ ಲಾಕ್ಡೌನ್ಗೆ ಸಡಿಲಿಕೆ ಬಗ್ಗೆ ಸಿಎಂ ಯಡಿಯೂರಪ್ಪ ಪ್ರಸ್ತಾಪಿಸುವ ಸಾಧ್ಯತೆಯಿದೆ. ಯೆಲ್ಲೋ ಝೋನ್ಗಳಿಗೆ ನಿರ್ಬಂಧ ಹಾಕಿ ಲಾಕ್ಡೌನ್ ಸಡಿಲಿಕೆ ಮಾಡಬಹುದು. ಗ್ರೀನ್ ಝೋನ್ಗಳಿಗೆ ಪೂರ್ಣವಾಗಿ ಲಾಕ್ಡೌನ್ ಸಡಿಲಿಸಬಹುದು. ರೆಡ್ ಝೋನ್ಗಳಿಗೆ ಕೆಲವು ವಲಯ ಸಡಿಲ ಮಾಡಿ ಉಳಿದಂತೆ ಲಾಕ್ಡೌನ್ ಮುಂದುವರಿಸಬಹುದು. ಕನಿಷ್ಠ ಒಂದು ವಾರಗಳ ಕಾಲ ನಿರ್ಬಂಧ ಹಾಕಿ ಲಾಕ್ಡೌನ್ ಮುಂದುವರಿಸುವುದು ಉತ್ತಮ. ಐಟಿ-ಬಿಟಿ, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಕೆಲಸಕ್ಕೆ ಅವಕಾಶ ಪ್ರಸ್ತಾಪಿಸುವ ಸಾಧ್ಯತೆಯಿದೆ. ಪ್ರಧಾನಿ ಮುಂದೆ ರಾಜ್ಯದ ಸ್ಥಿತಿಗತಿ ತಿಳಿಸಿದ ಮೇಲೆ ಕೇಂದ್ರದ ಸೂಚನೆಯಂತೆ ನಡೆಯಲು ಸಿಎಂ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ನಿನ್ನೆ ಒಂದೇ ದಿನ ದೇಶದಲ್ಲಿ 47 ಮಂದಿ ಅಸುನೀಗಿದ್ಧಾರೆ. 1,975 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ದೇಶದಲ್ಲಿ ಈವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 826ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 26,917 ತಲುಪಿದೆ. 5,803 ಮಂದಿ ಗುಣಮುಖರಾಗಿರುವ ಕಾರಣ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 19,868 ಆಗಿದೆ.
ಈಗಾಗಲೇ ದೆಹಲಿ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳು ಲಾಕ್ಡೌನ್ ವಿಸ್ತರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶಗಳು ಕೇಂದ್ರದ ಸೂಚನೆಯನ್ನು ಕಾಯುತ್ತಿವೆ. ಅಸ್ಸಾಂ, ಕೇರಳ, ಬಿಹಾರ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.