ಕೊಟ್ಟ ಕುದುರೆಯನ್ನೇರದವನು ವೀರನೂ ಅಲ್ಲ, ಶೂರನೂ ಅಲ್ಲ: ಕಾಂಗ್ರೆಸಿಗರಿಗೆ ಬಿಜೆಪಿ ಟೀಕೆ!
ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಆ ಅಶೋಕ್ ಅವರು ಕಾಲೆಳೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಜೂನ್ 14 ರಂದು ಆಯೋಜಿಸಿದೆ. ಕಾರ್ಯಕ್ರಮಕ್ಕೆ ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಡಿಕೆಶಿ ಕೋರಿಕೆಯನ್ನು ಸರ್ಕಾರ ತಿರಸ್ಕರಿಸಿದೆ.
ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾವೇನು 500 ಜನರನ್ನು ಸೇರಿಸಿಸುವುದಿರಲಿ, 65 ಜನರೂ ಕಾರ್ಯಕ್ರಮದಲ್ಲಿರುವುದಿಲ್ಲ. ಆದರೂ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ. ಹಾಗಿದ್ದರೆ, ಅಮಿತ್ ಶಾ ಅವರ ವರ್ಚುವಲ್ ರ್ಯಾಲಿಗೆ ಏಕೆ ಅವಕಾಶ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿತು. ಮೊನ್ನೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರೋಗ್ಯ ಸಚಿವ ಜನರನ್ನು ಸೇರಿಸಿ, ಸೇಬಿನ ಹಾರ ಹಾಕಿಸಿಕೊಂಡು ಬಂದಿದ್ದಾರೆ. ಅವೆಲ್ಲವೂ ನಿಯಮ ಉಲ್ಲಂಘನೆಯಲ್ಲವೇ ಅವರ ವಿರುದ್ಧ ಕ್ರಮತೆಗೆದುಕೊಳ್ಳು ಎಂದು ವಿರೋಧಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಕಾರ್ಯಕ್ರಮವನ್ನೂ ಅದೇ ದಿನ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ದೇಶದಲ್ಲಿ ಕೊರೋನಾ ಇದೆ. ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಹೀಗಿರುವಾಗ ಪದಗ್ರಹಣ ಕಾರ್ಯಕ್ರಮ ಮಾಡಿದರೆ ಹೇಗೆ? ಅಷ್ಟಕ್ಕೂ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರೆ ಮುಖ್ಯಮಂತ್ರಿ ಆಗಿಬಿಡ್ತಾರಾ? ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮುಂದೆ ನಮ್ಮದೇ ಸರ್ಕಾರ ಬರುತ್ತೆ ಎನ್ನುವ ಭ್ರಮೆಲಿದ್ದಾರೆ. ಈ ಭ್ರಮಾಲೋಕದಿಂದ ಅವರು ಹೊರಬರಲಿ ಎಂದು ರೇಣುಕಾಚಾರ್ಯ ಕಾಂಗ್ರೆಸಿಗರ ಕಾಲೆಳಿದಿದ್ದಾರೆ.
ಕಾಂಗ್ರೆಸಿಗರು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ನಿಯಮಗಳನ್ನು ಬದಲಾವಣೆ ಮಾಡಬೇಕು. ಅವರ ಪದಗ್ರಹಣ ದೇಶಕ್ಕೆ ರಾಜ್ಯಕ್ಕೆ ಬಹಳ ಮುಖ್ಯ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಜೆಡಿಎಸ್ನಿಂದಲೂ ಕಾರ್ಯಕರ್ತರಿಗೆ ನೀಡಿ ಎನ್ನುವ ಒತ್ತಡ ಹೆಚ್ಚಿದೆ. ಈ ವಿಚಾರವನ್ನ ದಿಕ್ಕುತಪ್ಪಿಸಲು ಖರ್ಗೆ ತಮಗೆ ಜೀವ ಬೆದರಿಕೆ ಇದೆ ಎನ್ನುವುದನ್ನು ಪ್ರಸ್ತಾಪ ಮಾಡಿದ್ದಾರೆ.