ಕೊಡಗು, ಮಲೆನಾಡು, ಕರಾವಳಿಯಲ್ಲಿ ಮುಂಗಾರು ಚುರುಕು, 8 ಜಿಲ್ಲೆಗಳಲ್ಲಿ ಅಪಾಯದ ಮುನ್ಸೂಚನೆ
ಕೊಡಗು, ಮಲೆನಾಡು, ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, 8 ಜಿಲ್ಲೆಗಳಲ್ಲಿ ಅಪಾಯದ ಮುನ್ಸೂಚನೆ ನೀಡಲಾಗಿದೆ. ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಿದೆ. ಇದೇ ವೇಳೆ ಚಂಡಮಾರುತಗಳು ತರುವ ಮಳೆಯ ಅವಾಂತರಗಳೂ ಹೆಚ್ಚಿದೆ.
ಕರಾವಳಿ ಭಾಗ, ಮಲೆನಾಡು ಮತ್ತು ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ, ಅಣೆಕಟ್ಟೆಗಳಿಗೆ ಒಳ ಹರಿವು ಹೆಚ್ಚಿದೆ. ಈ ಮಧ್ಯೆ ದಕ್ಷಣ ಕನ್ನಡ, ಬೆಳಗಾವಿ, ಕಲಬುರ್ಗಿ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಅಪಾಯದ ಮುನ್ಸೂಚನೆಯಿದ್ದು, ಎಲ್ಲೋ ಅಲರ್ಟ್ ಘೋಷಣೆಯಾಗಿದ್ದೆ.
ಇನ್ನು ಕೃಷ್ಣಾ ತಟದಲ್ಲಿ ಸಹ ನೀರಿನ ಹರಿವು ಹೆಚ್ಚಿದ್ದು ಉತ್ತರ ಕರ್ನಾಟಕದ ಭಾಗದ ಜಲಾಶಯಗಳಲ್ಲಿಯೂ ನೀರಿನ ಮಟ್ಟ ಹೆಚ್ಚಾಗಿದೆ. ಜೀವ ನದಿ ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲದ ಸುತ್ತ ಮುತ್ತ ಕಳೆದ 24 ತಾಸಿನಲ್ಲಿ ಭಾರೀ ಮಳೆಯಾಗಿದೆ. ಈ ಅವಧಿಯಲ್ಲಿ ಸುಮಾರು 107 ಮಿ.ಮೀ ಮಳೆ ದಾಖಲಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗಾಜನೂರು ಜಲಾಶಯ ತುಂಬಿ ತುಳುಕುತ್ತಿದ್ದು, ಒಳ ಹರಿವು ಹೆಚ್ಚಾದ ಕಾರಣ 2 ಸಾವಿರ ಕ್ಯುಸೆಕ್ನಷ್ಟು ನೀರನ್ನು ಹೊರ ಬಿಡಲಾಗಿದೆ. ಈ ಮಧ್ಯೆ ಕರಾವಳಿ ಭಾಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜೂನ್ 22ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಮಡಿಕೇರಿಯ ಕೆಲವೆಡೆ ಮಣ್ಣು ಗುಡ್ಡ ಕುಸಿದಿದ್ದು, ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿಸಿದೆ. ಕೃಷ್ಣೆಯ ಒಡಲು ಸಹ ತುಂಬುತ್ತಿದ್ದು, ಹಿಪ್ಪರಗಿ ಡ್ಯಾಂಗೆ 45,000 ಕ್ಯೂಸೆಕ್ಸ್ ನೀರಿನ ಒಳ ಹರಿದು ಇದೆ. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಮುಂಜಾಗ್ರತೆ ವಹಿಸಲು ನದಿ ತೀರದ ಹಳ್ಳಿಗಳಿಗೆ ಈಗಾಗಲೇ ಸೂಚಿಸಲಾಗಿದೆ.