ಕೊರೊನಾ ಜನಜಾಗೃತಿ ಮೂಡಿಸಲು ದೇವರ ಮೊರೆ ಹೋದ ಹಾವೇರಿ ಪೊಲೀಸರು…!
ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಲಾಕ್ ಡೌನ್ ನಡುವೆಯೂ ಜನ ಮನೆಬಿಟ್ಟು ಹೊರಬರುವುದನ್ನ ಬಿಡುತ್ತಿಲ್ಲ. ಹೀಗಾಗಿ ಹಾವೇರಿಯ ಪೊಲೀಸರು ಜನಜಾಗೃತಿ ಮೂಡಿಸಲು ದೇವರ ಮೊರೆ ಹೋಗಿದ್ದಾರೆ.
ಹೌದು… ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.
ವಿನಾಕಾರಣ ರಸ್ತೆಗಳಿಯುವ ಪುಂಡರಿಗೆ ಬುದ್ಧಿ ಕಲಿಸಲು ಯಮರಾಜ ಬೀದಿಗಿಳಿದಿದ್ದಾನೆ. ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಯಮ ಕೊರೊನಾ ವೈರಸ್ ವೇಷಧಾರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಹಿಡ್ಕೊಂಡು ಓಡಾಡುತ್ತಿದ್ದರೆ, ಇಬ್ಬರು ಕಿಂಕರರು ರಸ್ತೆ ತುಂಬ ಓಡಾಡುತ್ತಾ ಮನೆಬಿಟ್ಟು ಹೊರಗಡೆ ಓಡಾಡೋರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.
ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 15 ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಈ ನಡುವೆ ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಇನ್ನೇನು ಮುಂದಿನ ವಾರವಷ್ಏ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುತ್ತದೆ. ಆದರೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಹಾವೇರಿಯಲ್ಲಿ ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಗೆ ಬ್ಯಾಡಗಿ ಠಾಣೆ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ. ವೇಷಧಾರಿಗಳ ಮೂಲಕ ಮನೆಬಿಟ್ಟು ಹೊರಬರದೆ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ.