ಕೊರೊನಾ ಭೀತಿ : ಸರ್ಕಾರದ ಆದೇಶವನ್ನೂ ಲೆಕ್ಕಿಸದೆ ಅದ್ದೂರಿ ಮದುವೆ – ಹೆಚ್ಡಿಡಿ ಭಾಗಿ
ಗಾಳಿಯಂತೆ ಎಲ್ಲೆಡೆ ಎಗ್ಗಿಲ್ಲದೇ ಹರಡುತ್ತಿರುವ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಹಾಗೂ ಜನ ತಲೆ ಕೆಡಿಸಿಕೊಂಡಿದ್ದಾರೆ.
ಈ ನಡುವೆ ಸೋಂಕು ಹರಡದಂತೆ ತಡೆಯಲು ಸರ್ಕಾರ ಕಟ್ಟುಪಾಡುಗಳನ್ನ ಹೇರಿದೆ. ಹೆಚ್ಚು ಜನ ಸೇರಿಸಿ ಸಭೆ, ಮದುವೇ, ಜಾತ್ರೆ ಗಳನ್ನ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಆದೇಶವನ್ನೂ ಲೆಕ್ಕಿಸದೆ ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಅವರ ಪುತ್ರ ವೈ ಆರ್ ಗೌಡ, ಹಾಗೂ ಎಸ್ ಮೇಘನಾ ವಿವಾಹವನ್ನ ಅದ್ದೂರಿಯಾಗಿ ಮಾಡಿದ್ದು, ಮದುವೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಭಾಗಿಯಾಗಿ ಕಾನೂನು ಉಲ್ಲಂಘಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ತಾಜ್ ಪ್ಯಾಲೆಸ್ ನಲ್ಲಿ ನಿನ್ನೆ ಯಶೋಧರ್ ಪತ್ರನ ಅದ್ದೂರಿ ಮದುವೆ ಆಗಿದ್ದು ಸಾವಿರಾರು ಜನರು ಒಂದೆಡೆ ಸೇರಲು ಕಾರಣವಾಗಿದೆ.
ಆದರೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕಾದ ಜನ ಪ್ರತಿನಿಧಿಗಳೇ ಅದ್ದೂರಿ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವುದು ಜನರ ಆರೋಗ್ಯವನ್ನೂ ಲೆಕ್ಕಿಸದೆ ಅಲ್ಲಗಳೆದಂತೆ ಆಗಿದೆ. ಇನ್ನೂ ವಿಪರ್ಯಾಸ ಅಂದರೆ ಸರ್ಕಾರದ ಕಾನೂನನ್ನ ಕಟ್ಟು ನಿಟ್ಟಾಗಿ ಪಾಲಿಸಿ ಈ ತರಹದ ಸಭೆ ಸಮಾರಂಭಗಳನ್ನ ತಡೆದು ಕಾನೂನು ಕಾಪಾಡಬೇಕಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತಿದೆ. ಜಿಲ್ಲೆಯಲ್ಲಿ ಈ ತರಹದ ಪ್ರಕರಣಗಳು ಪದೇ ಪದೆ ನಡೆಯುತ್ತಿದ್ದರೂ ಇವುಗಳನ್ನ ತಡೆಯುವ ಪ್ರಯತ್ನ ಮಾತ್ರ ನಡೆದಿಲ್ಲ.