ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿ : ಪತ್ನಿ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣು…!
ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ಗೋಳಿಯಾಂಗಡಿ ಎಂಬಲ್ಲಿ ನಡೆದಿದೆ.
ಸೂರ್ಯನಾರಾಯಣ ಭಟ್ (50) ಎಂಬುವರೇ ಪತ್ನಿ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದವರು. ಪತ್ನಿ ಮಾನಸಿ (40) ಮಕ್ಕಳಾದ ಸುಧೀಂದ್ರ (14) ಮತ್ತು ಸುಧೀಶ್ (8) ಮೃತ ದುರ್ದೈವಿಗಳು.
ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಸೂರ್ಯನಾರಾಯಣ ಭಟ್ ಹಾಗೂ ಅವರ ಹೆಂಡತಿ ನಡುವೆ ಕೌಂಟುಬಿಕ ಕಲಹ ನಡೆಯುತ್ತಿತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಬೇಸತ್ತ ಸೂರ್ಯನಾರಾಯಣ ಭಟ್, ಮೊದಲು ವಿಷ ನೀಡಿ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಮೂವರಿಗೂ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಸೂರ್ಯನಾರಾಯಣ ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದ ಕ್ಷಣ ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ನಿಶಾ ಜೇಮ್ಸ್ ತೆರಳಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.