ಖಾತೆ ಹಂಚಿಕೆ ಜಗಳ : ಡಿಸಿಎಂ ಸ್ಥಾನ ಸೃಷ್ಠಿ – ವಿ.ಶ್ರೀನಿವಾಸ್ ಪ್ರಸಾದ್ ಅಸಮಾಧಾನ

 ರಾಜ್ಯ ಬಿಜೆಪಿ ಸರ್ಕಾರದ ಖಾತೆ ಹಂಚಿಕೆ ಜಗಳ ಮತ್ತು  ಮೂರು  ಡಿಸಿಎಂ ಸ್ಥಾನ ಸೃಷ್ಠಿಸಿರುವುದಕ್ಕೆ ಸ್ವಪಕ್ಷದ ವಿರುದ್ದವೇ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

17  ಜನ ಶಾಸಕರು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಅವರು ಇಲ್ಲದಿದ್ದರೆ ನಿಮ್ಮ ಸರಕಾರ ರಚನೆ ಆಗುತ್ತಿತ್ತಾ..? ನಿಮಗೆ ಬಹುಮತ ಇತ್ತಾ.? ಎಂದು ಸ್ವಪಕ್ಷದ ವಿರುದ್ದವೇ ಸಂಸದ ಶ್ರೀನಿವಾಸ್ ಪ್ರಸಾದ್ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್ , ರಾಜ್ಯದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಮೂರು ಮೂರು ಜನ ಉಪ ಮುಖ್ಯ ಮಂತ್ರಿಗಳು ಬೇಕಾಗಿರಲಿಲ್ಲ. ಸಂವಿಧಾನದಲ್ಲಿಯೇ ಉಪಮುಖ್ಯಂತ್ರಿಗಳು ಮಾಡುವ ವಿಚಾರವೇ ಇಲ್ಲ. ಬಿಜೆಪಿ ಹೈ ಕಮಾಂಡ್ ಈ ತೀರ್ಮಾನ ಮಾಡಿದ್ದರೂ ನಾನು ವಿರೋಧ ಮಾಡ್ತಿನಿ. ಹೈಕಮಾಂಡ್ ನಿರ್ಧಾರ ಸರಿಯಿಲ್ಲ. ಹೈಕಮಾಂಡ್ ಗೆ ಕರೆಟ್ಟಾಗಿ ಮಾಹಿತಿ ನೀಡಬೇಕಿತ್ತು. ಹೈಕಮಾಂಡ್ ನಿರ್ಧಾರಕ್ಕೆ ನನ್ನ ವೈಯುಕ್ತಿಕ ವಿರೋಧವಿದೆ ಎಂದು ಬಿಜೆಪಿ ಹೈಕಮಾಂಡ್ ತೀರ್ಮಾದ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು.

ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಭವಿಷ್ಯದ ಬಗ್ಗೆ ನಿಮಗೆ ಗಮನ ಬೇಡ್ವಾ ಎಂದು ಪ್ರಶ್ನಿಸಿದ ವಿ.ಶ್ರೀನಿವಾಸ್ ಪ್ರಸಾದ್,  ಅವರು ಇಲ್ಲದಿದ್ದರೆ ನಿಮ್ಮ ಸರಕಾರ ರಚನೆ ಆಗುತ್ತಿತ್ತಾ..? ನಿಮಗೆ ಬಹುಮತ ಇತ್ತಾ.? ಅತೃಪ್ತರ ರಾಜೀನಾಮೆಯಿಂದ ನಿಮಗೆ ಅಧಿಕಾರ ಸಿಕ್ಕಿದೆ. ಇದನ್ನು ನೆನಪಿಟ್ಟು ಕೊಳ್ಳಿ. ಆ 17 ಜನ ಹೊರಬಂದಿದ್ದಕ್ಕೆ ತಾನೆ ನೀವು ಸರ್ಕಾರ ಮಾಡಿದ್ದು. ನಿಮಗೇನು 113 ಸ್ಥಾನ ಇತ್ತಾ. ಯಾಕ್ ರೀ ಈ ಥರ ಕಚ್ಚಾಡ್ತೀರಾ..? ಎಂದು ಸ್ವಪಕ್ಷದ ವಿರುದ್ದವೇ ಗುಡುಗಿದರು.

ಜನ ಬಿಜೆಪಿಗೆ ಬಹುಮತ ಕೊಟ್ಟಿರಲಿಲ್ಲ ಅಂತದ್ರಲ್ಲಿ ಸರ್ಕಾರ ರಚನೆ ಮಾಡಿದ್ದಿರಿ. ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ಕೊಡಬೇಕಿತ್ತು. ಈ ರೀತಿಯಲ್ಲಿ ಕಚ್ಚಾಟ ಮಾಡೋದು ಸರಿಯಲ್ಲ. ನಾನು ಏನಾದ್ರೂ ಹೇಳಕ್ಕೋ ಹೋದ್ರೆ ಯಾರು ಕೇಳ್ತಾರೆ. ಎಲ್ಲರೂ ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯನು ಕೂಡ ಅತೃಪ್ತ ಶಾಸಕರೇ…

ಅನರ್ಹ ಶಾಸಕರನ್ನು ಬಿಜೆಪಿಯವರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡೋಲ್ಲ. ಅವರ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ ಅದು ಇತ್ಯಾರ್ಥ ಆದ ಮೇಲೆ ಅವರಿಗೂ ಸಚಿವ ಸ್ಥಾನ ಸಿಗುತ್ತೆ. ಹಾಗೇ ನೋಡೋಕ್ಕೆ ಬಂದರೆ ಸಿದ್ದರಾಮಯ್ಯ ಸಹ ಅತೃಪ್ತ ಶಾಸಕರೆ. ಅವರು ಸಿಎಲ್ ಪಿ ಮೀಟಿಂಗ್ ನಲ್ಲಿ ಹೇಳಿದ್ದಾರೆ ನಾನು ಇಪ್ಪತ್ತು ಪತ್ರ ಬರೆದೆ ಸಿಎಂ ಅದಕ್ಕೆ ಉತ್ತರ ಕೊಟ್ಟಿಲ್ಲ ಅಂತಾರೆ. ಅದ್ದರಿಂದ ಮೊದಲ ಅತೃಪ್ತ ಶಾಸಕ ಸಿದ್ಧರಾಮಯ್ಯನವರೇ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.

ಒಳ ಮೀಸಲಾತಿ ಸಂವಿಧಾನ ಬಾಹಿರ ಎಂದು ನ್ಯಾಯಾಲಯ ಹೇಳಿದೆ: ರಾಷ್ಟ್ರಮಟ್ಟದಲ್ಲಿ ಕೇಂದ್ರ ಉನ್ನತ ಮಟ್ಟದ ಆಯೋಗ ರಚಿಸಬೇಕು

ಒಳ ಮೀಸಲಾತಿ ಸಂವಿಧಾನ ಬಾಹಿರ ಎಂದು ನ್ಯಾಯಾಲಯ ಹೇಳಿದೆ.ಈ ಕಾರಣದಿಂದ ನಾನು ಇತ್ತೀಚೆಗೆ ಈ ವಿಷಯ ಪ್ರಸ್ತಾಪ ಮಾಡಿದ್ದೇನೆ. ರಾಷ್ಟ್ರಮಟ್ಟದಲ್ಲಿ ಕೇಂದ್ರ ಉನ್ನತ ಮಟ್ಟದ ಆಯೋಗ ರಚಿಸಬೇಕು. ಮಂಡಲ ಆಯೋಗದ ಮಾದರಿಯಲ್ಲಿ ಸಮಿತಿ ರಚಿಸಬೇಕು.  ಕೆಲವರು ರಾಜಕೀಯ ತೆವಲಿಗಾಗಿ ಒಳ ಮೀಸಲಾತಿ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಇದನ್ನ ನ್ಯಾಯಾಲಯ ಮಾನ್ಯ ಮಾಡುವುದಿಲ್ಲ. ಒಳ ಮೀಸಲಾತಿ ಅನುಷ್ಠಾನಕ್ಕೆ ಸಂವಿಧಾನದ ಮಾನ್ಯತೆ ಅಗತ್ಯ.ಇದನ್ನ ವೈಜ್ಞಾನಿಕ ತಳಹದಿಯ ಮೇಲೆ ರೂಪಿಸಬೇಕಿದೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.

ಜಾತಿಯತೆ ಎಲ್ಲಿಯವರೆಗೆ ಇರುತ್ತೆ ಅಲ್ಲಿಯವರೆಗು ಮೀಸಲಾತಿ ಇರಬೇಕು. ಮೀಸಲಾತಿಯೇ ಬೇಡ ಅನ್ನೋರ ಜೊತೆ  ಏನ್  ಚರ್ಚೆ ಮಾಡೋದು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

mysore-v-srinivas-prasad-expressed-displeasure-bjp-three-dcm-posts

ಮೋಹನ್ ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್‌, ಮೋಹನ್ ಭಾಗವತ್ ಅವರದ್ದು ವೈಯುಕ್ತಿಕ ಹೇಳಿಕೆ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಹೋದ್ರೆ ಧರ್ಮ ಸಂಪೂರ್ಣವಾಗೋಲ್ಲ ಅಂತ ಭಾಗವತ್ ಹೇಳುತ್ತಾರೆ. ಅವರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ. ಆದ್ರೆ ಅವರ ಅಭಿಪ್ರಾಯಗಳು ನಮಗೆ ಇಷ್ಟ ಆಗೋಲ್ಲ. ಭಾಗವತ್ ಅವರೇ ಮೊದಲು ಜಾತಿಯತೆ ಬಗ್ಗೆ ಮಾತನಾಡಿ. ಭಾಗವತ್ ಅವರ ಹೇಳಿಕೆಯನ್ನ ಬಿಜೆಪಿ ಪರಿಗಣಿಸುತ್ತಾ ಇಲ್ವಾ ಅಂತ ನನಗೆ ಗೊತ್ತಿಲ್ಲ.ಆದ್ರೆ ಅವರು ಮೀಸಲಾತಿಗಿಂತ ಮೊದಲು ಜಾತಿಯತೆ ಬಗ್ಗೆ ಮಾತನಾಡಲಿ ಎಂದು ಟಾಂಗ್ ಕೊಟ್ಟರು.

ಆರ್.ಎಸ್.ಎಸ್. ಸಲಹೆಯಂತೆ ಬಿಜೆಪಿ ಸರ್ಕಾರ ನಡೆಸುತ್ತೆ ಅನ್ನೋದರ ಬಗ್ಗೆ ನಾನು ಮಾತನಾಡೋಲ್ಲ. ಬಿಜೆಪಿ ಮೀಸಲಾತಿ ಬಗ್ಗೆ ಮಾತನಾಡಿದ್ರು ನಾನು ಇದನ್ನೆ ಹೇಳುತ್ತೇನೆ. ಮೊದಲು ಜಾತಿಯತೆ ಬಗ್ಗೆ ಚರ್ಚೆ ನಡೆಯಲಿ. ಆ ನಂತರ ಮೀಸಲಾತಿ ಬಗ್ಗೆ ಚರ್ಚೆ ನಡೆಯಲಿ.‌ ಜಾತಿಯತೆ ಎಲ್ಲಿಯವರೆಗೆ ಇರುತ್ತೆ ಅಲ್ಲಿಯವರೆಗು ಮೀಸಲಾತಿ ಇರಬೇಕು ಎಂದರು.

ಮೀಸಲಾತಿ ಬಗ್ಗೆ ಮೋಹನ್ ಭಾಗವತ್ ಹೇಳಿಕೆಯನ್ನ ಅಮೀತ್ ಷಾ ಮೌನವಾಗಿ ಸ್ವೀಕರಿಸಿಲ್ಲ. ಅವರೇನಾದ್ರು ಮೌನವಾಗಿ ಸ್ವೀಕರಿಸಿದ್ರೆ ನಮ್ಮಂತವರ ಸುಮ್ಮನಿರೋಲ್ಲ. ಅಮೀತ್ ಷಾ ಮಿಸಲಾತಿ ಬಗ್ಗೆ ಮೌನವಾಗಿಲ್ಲ ಅಂತ ನನಗೆ ಅನ್ನಿಸುತ್ತಿದೆ ಎಂದು  ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights