ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಸಿಎಎ ಪರ ಸಹಿಗೆ ಒತ್ತಾಯ : ವಿದ್ಯಾರ್ಥಿನಿಯರಿಂದ ಭಾರೀ ವಿರೋಧ
ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಸಿಎಎ ಪರ ಸಹಿ ಸಂಗ್ರಹಕ್ಕೆ ಮುಂದಾಗಿದ್ದು, ಇದಕ್ಕೆ ಕೆಲ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಶಾಸಕ ರಾಮಲಿಂಗಾರೆಡ್ಡಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ ವಿದ್ಯಾರ್ಥಿಗಳು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಗೆ ಮಾಡಿದ್ದಾರೆ. ಬಲವಂತವಾಗಿ ಸಹಿಗೆ ಕೆಲವೊಂದಿಷ್ಟು ಜನ ಮುಂದಾಗಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡ ಬಂಧಿಸಲಾಗಿಲ್ಲ ಎಂದು ಗುಡುಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು..?
ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸುವಂತೆ ಕೋರಿ ಕಾಲೇಜ್ ಗೋಡೆ ಮೇಲೆ ಬ್ಯಾನರ್ ಹಾಕಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನಮಕಿ ನಡೆದಿದೆ.
ಬೆಂಗಳೂರಿನ ಕೋರಮಂಗಲ ಜ್ಯೋತಿ ನಿವಾಸ್ ಕಾಲೇಜ್ ಬಳಿ ಈ ಘಟನೆ ನಡೆದಿದೆ. ನಗರಾದ್ಯಂತ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಸಿಎಎ ಪರ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್ ಮುಂಭಾದ ಗೋಡೆಗೆ ಸಿಎಎ ಬೆಂಬಲಿಸಿ ಅನ್ನೋ ಬ್ಯಾನರ್ ಹಾಕಿದ್ರು.
ಇದನ್ನು ನೋಡಿದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಲೇಜ್ ಗೋಡೆಗಳ ಮೇಲೆ ನೀವು ರಾಜಕೀಯ ಮಾಡುವುದಕ್ಕೆ ಬರಬೇಡಿ ಎಂದು ಬ್ಯಾನರ್ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಆದರೆ ಕಾರ್ಯಕರ್ತರು ಬ್ಯಾನರ್ ತೆಗೆಯಲ್ಲ, ನಿಮ್ಮ ಕಾಲೇಜ್ ಆಡಳಿತ ಮಂಡಳಿ ಕರೆದುಕೊಂಡು ಬಂದು ಹೇಳಿಸಿ. ಆಗ ತೆಗೆಯುತ್ತೀವಿ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಈ ಗಲಾಟೆ ವಿಡಿಯೋ ಮತ್ತು ಮಾತಿನ ಚಕಮಕಿ ದೃಶ್ಯ ವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ನ್ಯಾಯ ಕೊಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.