ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನದ ಬಗ್ಗೆ ಪರಿಸರ ಪ್ರೇಮಿಗಳ ಏನಂತಾರೆ ಗೊತ್ತಾ…?
ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕೆರೆಗಳ ಕಲುಷಿತ ನೀರನ್ನೇ ಒಡಲಲ್ಲಿ ತುಂಬಿ ಹರಿಯುತ್ತಿರುವ ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ. ಆದ್ರೆ ನದಿ ಮೂಲಕ್ಕು ಮೊದಲು ಜಲ ಮೂಲ ಶುದ್ಧಿಕರಿಸಬೇಕು ಎಂಬ ಕೂಗು ಪರಿಸರ ಪ್ರೇಮಿಗಳ ವಲಯದಿಂದ ಇದೀಗ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಹುಟ್ಟಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಹರಿದು ತಮಿಳುನಾಡು ಮೂಲಕ ಬಂಗಾಳಕೊಲ್ಲಿ ಸೇರುವ ದಕ್ಷಿಣ ಪಿನಾಕಿನಿ ನದಿ ಮೂಲ ಸಂಪೂರ್ಣ ಕಲುಷಿತಗೊಂಡಿದೆ. ಹಾಗಾಗಿ ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಸುಮಾರು 2600 ಕೋಟಿ ವೆಚ್ಚದಲ್ಲಿ ದಕ್ಷಿಣ ಪಿನಾಕಿನಿ ನದಿ ಶುದ್ಧೀಕರಣಕ್ಕೆ ಮುಂದಾಗಿದೆ. ಆದ್ರೆ ಈ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ನದಿಯ ಜಲ ಮೂಲಗಳಾದ ಕೆರೆಗಳ ಶುದ್ಧೀಕರಣ ಮಾಡಬೇಕು ಎಂದು ಪರಿಸರವಾದಿಗಳ ಒತ್ತಾಯವಾಗಿದೆ.
ಈಗಾಗಲೇ ಬೆಂಗಳೂರು ಸುತ್ತಮುತ್ತಲಿನ ಕೆರೆಗಳು ಹಾನಿಕಾರಕ ತ್ಯಾಜ್ಯಗಳಿಂದ ಕೊಳೆತು ಗಬ್ಬುನಾರುತ್ತಿವೆ. ಅವುಗಳ ಶುದ್ಧೀಕರಣ ಮತ್ತು ಸಂಸ್ಕರಿಸಲು ಅಗತ್ಯವಾದ ಎಸ್ಟಿಪಿ ವ್ಯವಸ್ಥೆ ಸಿದ್ದವಾಗಿಲ್ಲ. ನದಿಯ ನೀರಿನ ಮೂಲವೇ ಶುದ್ಧವಾಗದೇ ನದಿಯನ್ನು ಹೇಗೆ ಶುದ್ಧ ಮಾಡಲು ಸಾಧ್ಯ ಎಂದು ಪರಿಸರವಾದಿ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಅಂದಹಾಗೆ ದಕ್ಷಿಣ ಪಿನಾಕಿನಿ ನದಿ ಸರ್ಜಾಪುರ ಸಮೀಪವೇ ಹಾದು ಹೋಗುತ್ತಿದೆ. ಸರ್ಜಾಪುರ ಸುತ್ತಮುತ್ತಲಿನ 19 ಕ್ಕು ಅಧಿಕ ಕೆರೆಗಳೊಂದಿಗೆ ಇಂಟರ್ ಲಿಂಕ್ ಇದೆ. ಸರ್ಜಾಪುರ ಸುತ್ತಮುತ್ತಲಿನ ಕೆರೆಗಳು ಅಷ್ಟಾಗಿ ಕಲುಷಿತಗೊಂಡಿಲ್ಲ. ಈಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡರೆ ಕೆರೆಗಳನ್ನು ಉಳಿಸಿ ಸಂರಕ್ಷಿಸಬಹುದು. ಆದ್ರೆ ದಕ್ಷಿಣ ಪಿನಾಕಿನಿ ನದಿ ಯೋಜನೆ ತುಂಬಾ ದೊಡ್ಡ ಯೋಜನೆಯಾಗಿದ್ದು, ಸುಮಾರು 2600 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಆದ್ರೆ ಯೋಜನೆ ರೂಪುರೇಷೆಗಳನ್ನು ಸರ್ಕಾರ ವಿವರಿಸಿಲ್ಲ. ದಕ್ಷಿಣ ಪಿನಾಕಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಸಂಖ್ಯೆಯ ಕೆರೆಗಳಿದ್ದು, ನದಿ ಪುನಶ್ಚೇತನದ ಜೊತೆಗೆ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದ್ರೆ ಕೆರೆಗಳು ಕಲುಷಿತಗೊಂಡು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಪರಿಸರ ಪ್ರೇಮಿಗಳು ಯೋಜನೆ ಬಗ್ಗೆ ಪರಿಸರ ಪ್ರೇಮಿ ದೀಪಾಂಜಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ದಕ್ಷಿಣ ಪಿನಾಕಿನಿ ನದಿ ಕಲುಷಿತಗೊಂಡು ಕೃಷಿ ಬಳಕೆಗೆ ಯೋಗ್ಯವಲ್ಲದಂತಾಗಿದ್ದು, ಇದೀಗ ಸರ್ಕಾರ ನದಿ ಪುನಶ್ಚೇತನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಆದರೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ನದಿ ಪುನಶ್ಚೇತನಗೊಳಿಸಲಿ ಎಂಬುದು ಪರಿಸರವಾದಿಗಳ ಸಲಹೆಯಾಗಿದೆ.