ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗದಲ್ಲಿ ಕ್ವಾರಂಟೈನ್ಗೆ ತೀವ್ರ ವಿರೋಧ, ಪ್ರತಿಭಟನೆ!
ಕೊರೊನಾ ಲಾಕ್ ಡೌನ್ ಸಡಿಲಗೊಂಡ ಪರಿಣಾಮ ಹೊರ ರಾಜ್ಯಗಳಲ್ಲಿ ಲಾಕ್ ಆಗಿದ್ದ ವಲಸೆ ಕಾರ್ಮಿಕರು ಸದ್ಯ ತಮ್ಮ ತಮ್ಮ ಊರುಗಳತ್ತ ಬರುತ್ತಿದ್ದಾರೆ. ಹೀಗೆ ಹೊರ ರಾಜ್ಯಗಳಿಮದ ಬರುವ ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಕೆಲ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದಾರೆ.
ಹೌದು… ಶಿವಮೊಗ್ಗ, ಚಿತ್ರದುರ್ಗ, ದಾವಣೆಗೆರೆ ಜಿಲ್ಲೆಗಳ ಕೆಲ ಗ್ರಾಮಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ಮೂರು ಜಿಲ್ಲೆಗಳಿಗೂ ಬೇರೆ ಬೇರೆ ರಾಜ್ಯಗಳಿಮದ ಕಾರ್ಮಿಕರು ಬರುತ್ತಿದ್ದಾರೆ. ಇದಕ್ಕಾಗಿ ಕಾರ್ಮಿಕರಿಗೆ ಜಿಲ್ಲಾಡಳಿತ ಸರ್ಕಾರಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ಕೈಗೊಂಡಿದೆ. ಆದರೆ ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಸಮೀಪದ ಗೊಂದಿ ಚಟ್ನಹಳ್ಳಿ ಬಳಿಯ ಅಲ್ಪ ಸಂಖ್ಯಾತರ ವಸತಿ ಶಾಲೆಯಲ್ಲಿ ಹೊರ ರಾಜ್ಯದಿಂದ ಬಂದಿದ್ದ 15 ಮಂದಿಯನ್ನು ಕ್ವಾರಂಟೈನ್ ಮಾಡಲು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಆದರೆ ಈ ವೇಳೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲು ನಾವು ಬಿಡುವುದಿಲ್ಲ ಎಂದು ಬಸ್ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕ್ವಾರಂಟೈನ್ ಮಾಡಲಾಗಿದೆ.
ಇನ್ನೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತಂಡಗ ಗ್ರಾಮ ಬಳಿಯ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರ ಹಿನ್ನೆಲೆ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಕ್ವಾರಂಟೈನ್ ವ್ಯವಸ್ಥೆಯನ್ನು ಬೇರೆಡೆ ಶಿಫ್ಟ್ ಮಾಡಿದೆ.
ಜೊತೆ ದಾವಣಗೆರೆ ಜಿಲ್ಲೆಯ ಶಿವನಗರದಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲು ಜನರು ವಿರೋಧ ಮಾಡುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಯುವಕನ ಏರಿಯಾವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ವೇಳೆ ಕಂಟೈನ್ಮೆಂಟ್ ಝೋನ್ ಮಾಡಬೇಡಿ ಎಂದು ನೂರಾರು ಜನರು ತಡೆದಿದ್ದಾರೆ.