ನ್ಯೂ ಇಯರ್ ಎಫೆಕ್ಟ್.. ಆಫೀಸರ್ ಚಕ್ಕರ್ : ಬಾಗಲಕೋಟೆ ಜಿಲ್ಲಾಡಳಿತ ಭವನ ಖಾಲಿ ಖಾಲಿ..!
ಹೊಸ ವರ್ಷದ ಮೊದಲ ದಿನ ಬಾಗಲಕೋಟೆ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನ ಜನರು, ಅಧಿಕಾರಿಗಳು ಇಲ್ಲದೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು..
ಬೆಳಿಗ್ಗೆ ಮೇಲಾಧಿಕಾರಿಗಳಿಗೆ ವಿಶ್…ಮಧ್ಯಾಹ್ನ ಕಚೇರಿಗೆ ಚಕ್ಕರ್
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಅಂದಾಜು 40 ಕಚೇರಿಗಳಿವೆ.ಜಿಲ್ಲಾಡಳಿತ ಭವನದಲ್ಲಿ ಸರ್ಕಾರಿ ಕೆಲಸದ ಅವಧಿಯಲ್ಲಿ ಜನಜಂಗುಳಿಯಿಂದ ತುಂಬಿರುತ್ತಿತ್ತು.. ಅಧಿಕಾರಿಗಳ ಬಳಿ ಸಮಸ್ಯೆ ಹೊತ್ತು ಜನರು ಬರುತ್ತಿದ್ದರು.ಆದ್ರೆ ಇವತ್ತು ಹೊಸ ವರ್ಷದ ಮೊದಲ ದಿನವಾಗಿದ್ದರಿಂದ ಅಧಿಕಾರಿಗಳು ಕೈಗೆ ಸಿಗುವುದಿಲ್ಲವೆಂದು ಸಾರ್ವಜನಿಕರು ಜಿಲ್ಲಾಡಳಿತ ಭವನದತ್ತ ಬರುವವರ ಸಂಖ್ಯೆ ಕಡಿಮೆಯಾಗಿದ್ದರೆ.
ಇನ್ನು ಕೆಳಹಂತದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ,ಮಧ್ಯಾಹ್ನ ಕಾಲ್ಕಿತ್ತವರು ವಾಪಸ್ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಬಹುತೇಕ ಕಚೇರಿಯಲ್ಲಿ ಕುರ್ಚಿಗಳು ಖಾಲಿ,ಖಾಲಿಯಾಗಿದ್ದವು.ಕಚೇರಿಯಲ್ಲಿದ್ದ ಬೆರಳಣಿಕೆ ಅಧಿಕಾರಿಗಳನ್ನು ಕೆಲ ಸಾರ್ವಜನಿಕರು ಕೆಲ್ಸ ನಿಮಿತ್ತ ಕೇಳಿದಾಗ ಸಾಹೇಬರು ಇಲ್ಲೆ ಹೊರಗಡೆ ಹೋಗಿದ್ದಾರೆ.ಏನಾದರೂ ಕೆಲ್ಸವಿತ್ತೇ.ಬರ್ತಾರೆ ಇರಿ ಎಂದು ಸಿದ್ದ ಉತ್ತರ ನೀಡುತ್ತಿದ್ರು.ಕೆಲ ಕಚೇರಿಯಲ್ಲಿ ಮೇಲಾಧಿಕಾರಿಗಳು ಮಧ್ಯಾಹ್ನವೂ ಕಚೇರಿಯತ್ತ ಸುಳಿದಿಲ್ಲ.ಹೀಗಾಗಿ ಮೇಲಾಧಿಕಾರಿಗಳು ಇಲ್ಲದೇ ಕೆಳಹಂತದ ಕೆಲವು ಅಧಿಕಾರಿಗಳು ಸಾಹೇಬರೇ ಇಲ್ಲವೆಂದು ಕಚೇರಿಗೆ ಚಕ್ಕರ್ ಹೊಡೆದಿದ್ದರು.
ಕೆಲ ಅಧಿಕಾರಿಗಳು ಸಭೆ,ಕ್ಷೇತ್ರ ಭೇಟಿ ನೆಪ
ಕಂದಾಯ, ಆರೋಗ್ಯ, ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಜಿಪಂ ಇಂಜಿನಿಯರಿಂಗ್ ವಿಭಾಗ,ಯೋಜನಾ ಕಚೇರಿ, ಜಿಲ್ಲಾಧಿಕಾರಿ ಅಧಿಕಾರಿಗಳ ವಿಭಾಗ, ಚುನಾವಣಾ ವಿಭಾಗ,ಸಹಕಾರಿ ಇಲಾಖೆ,ತೋಟಗಾರಿಕೆ ಇಲಾಖೆ ಸೇರಿದಂತೆ ಬಹುತೇಕ ಇಲಾಖೆ ಕಚೇರಿಯಲ್ಲಿ ಬೆರಳೆಣಿಕೆ ಅಧಿಕಾರಿಗಳನ್ನು ಬಿಟ್ಟರೆ.ಇನ್ನುಳಿದ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಕೆಲವರು ಸಭೆ ಇದೆ,ಇನ್ನು ಕೆಲವರು ಕ್ಷೇತ್ರ ಭೇಟಿಯಲ್ಲಿದ್ದೇನೆ ಎಂದಿದ್ದಾರೆ..
ಸಂಜೆಯೂ ಮೇಲಾಧಿಕಾರಿಗಳ ಮನೆಗೆ ಹೋಗಿ ವಿಶ್
ಇನ್ನು ಕೆಲ ಅಧಿಕಾರಿಗಳು ಸಂಜೆಯೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ಮನೆಗೆ ಹೋಗಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.ಈ ವೇಳೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಚೇರಿಯ ಅಧಿಕಾರಿಗಳು ಸೇರಿ ಹೊಸ ವರ್ಷದ ಶುಭಾಶಯ ಕೋರುವ ಕಾರ್ಯಕ್ರಮವು ನಡೆದಿತ್ತು ಎನ್ನಲಾಗಿದೆ.
ಏನೇ ಆಗಲಿ ಹೊಸ ವರ್ಷದ ನೆಪದಲ್ಲಿ ಕಚೇರಿಗೆ ಚಕ್ಕರ್ ಹೊಡೆಯುವುದು ಎಷ್ಟು ಸರಿ ಅನ್ನೋದು ಪ್ರಜ್ಞಾವಂತರ ಪ್ರಶ್ನೆಯಾಗಿದೆ…