ಬಂಡೆಯ ಭಯ : ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಕೆಳಗಿರುವ ಜನರಿಗೆ ಇದೇನಿದು ಸಂಕಷ್ಟ..?
ಅವರಿಗೆ ರಾತ್ರಿಯಾದ್ರೆ ನಿದ್ರೆ ಬರ್ತಾಯಿಲ್ಲ. ಜೋರು ಶಬ್ದ ಬಂದ್ರೆ ಎದೆಯಲ್ಲ ಒಂದು ಕ್ಷಣ ನಡುಗಿ ಹೋಗುತ್ತೆ. ಪುಟ್ಟ ಮಕ್ಕಳನ್ನ ಕರೆದುಕೊಂಡು ನಡು ರಾತ್ರಿ ಬೆಟ್ಟದ ಕಡೆ ಕಣ್ಣಾಯಿಸಿ ನೋಡುವುದು ಅಂದ್ರೆ ಆ ಜನರಿಗೆ ಅದಿನ್ನೆಂತ ಭಯ ಆಗಿರಬೇಡ.
ಹೌದು… ಇಂಥಹ ವಾತಾವರಣ ಸೃಷ್ಟಿಯಾಗಿದ್ದು ಬೆರೆಲ್ಲೂ ಅಲ್ಲ ನಮ್ಮದೇ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ. ಗೋಕಾಕ್ ನ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳೇ ಜನರಲ್ಲಿ ಇಂಥಹ ಭಯ ಹುಟ್ಟಿಸುತ್ತಿರೋದು.
ಅಧಿಕ ಮಳೆಗೆ ತತ್ತರಿಸಿದ ಜನರಿಗೆ ಸದ್ಯ ಮಳೆ ನೀರಿನೊಂದಿಗೆ ಬಂಡೆಯ ಭಯ ಶುರುವಾಗಿದೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಬಂಡೆಯನ್ನ ಕಂಡು ಜನ ಆತಂಕಕೊಂಡು ರಾತ್ರಿ ಹಗಲು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಬಂಡೆಯನ್ನೇ ಕಾಯುತ್ತಿದ್ದಾರೆ.
ಹೌದು.. ಮೊನ್ನೆಯಷ್ಟೇ ಮಲ್ಲಿಕಾರ್ಜುನ ಬೆಟ್ಟದ ಬೃಹದಾಕಾರದ ಬಂಡೆ ಬೀಳುವ ಸ್ಥಿಯ ಬಗ್ಗೆ ಗೋಕಾಕ್ ತಹಶೀಲ್ದಾರ್ ರಿಗೆ ಮನವರಿಕೆ ಮಾಡಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ನೂರು ಮಾಲೀಕರಿಗೆ ಮನೆ ಖಾಲಿ ಮಾಡುವಂತೆ ಗೋಕಾಕ್ ತಹಶೀಲ್ದಾರ್ ಸೂಚಿಸಿದ್ದಾರೆ.
ಆದರೆ ಮನೆ ಕಳೆದುಕೊಂಡು ಎಲ್ಲಿಗೆ ಹೋಗುವುದು..? ಎಲ್ಲಿ ಜೀವಿಸುವುದು..? ಅನ್ನೋದೇ ಇಲ್ಲಿರುವ ಜನರ ಚಿಂತೆ. ಮನೆ ಬಿಡಲು ಆಗದೇ, ಇರಲೂ ಆಗದೇ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ.
ಬಂಡೆಗಳನ್ನ ಪರಿಶೀಲಿಸಿ ನೋಡಿದಾಗ ಬಂಡೆಗಳು ದಿನದಿಂದ ದಿನಕ್ಕೆ ಮುಂದೆ ಸರಿಯುತ್ತಿರುವುದು ಗಮನಕ್ಕೆ ಬಂದಿರುವುದು ಭಾರೀ ಭಯವನ್ನುಂಟು ಮಾಡಿದೆ. ಹಾಗಾಗಿ ಸ್ಥಳದಲ್ಲಿ ಎನ್ಡಿಆರ್ಎಫ್ ತಂಡದ ಸಿಬ್ಬಂದಿ ಬೆಳಗ್ಗೆಯಿಂದಲೂ ಬಂಡೆಯನ್ನು ಬ್ಲಾಸ್ಟ್ ಮಾಡುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಬಂಡೆ ಬ್ಲಾಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ತಹಶೀಲ್ದಾರ್, ನೂರು ಮನೆ ಮಾಲೀಕರಿಗೆ ಈ ಕೂಡಲೇ ಮನೆ ಖಾಲಿ ಮಾಡಿ ಬೇರೆ ಕಡೆ ಹೋಗಿ. ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಜೋಡಿ ಬಂಡೆ ಬಂದು ಉರುಳಬಹುದು ಎಂದು ಹೇಳಿದ್ದಾರೆ. ಹೀಗಾಗಿ ಅಂಬೇಡ್ಕರ್ ನಗರ, ಸಂಗಮನಗರ, ಗೊಲ್ಲರ ಗಲ್ಲಿ, ಸಿದ್ದೇಶ್ವರ ನಗರ ಸೇರಿ ಮರಾಠಾ ಗಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ರಾತ್ರಿ ಸುರಿದ ಮಳೆಗೆ ಬಂಡೆ ಸುತ್ತಮುತ್ತ ಮಣ್ಣು ಕುಸಿದು ಮತ್ತೆ ಐದು ಅಡಿಯಷ್ಟು ಕೆಳಜಾರಿದೆ. ಮಂಗಳವಾರ ಎಂಟು ಅಡಿಯಷ್ಟು ಜೋಡಿಗಲ್ಲು ಗುಡ್ಡದ ಕೆಳಗೆ ಸರಿದಿತ್ತು. ಮಣ್ಣು ಕುಸಿತಕ್ಕೆ ಇಂದು ಮತ್ತೆ ಐದು ಅಡಿಯಷ್ಟು ಬಂಡೆಗಲ್ಲು ಜಾರಿದೆ. ಬಂಡೆಗಲ್ಲು ಕೆಳ ಜಾರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದ ಜನರು ಆತಂಕದಲ್ಲಿ ಇದ್ದಾರೆ.