ಬಡಮಕ್ಕಳ ನೆರವಿಗೆ ಮುಂದಾದ ಕೆಎಲ್ ರಾಹುಲ್ : ನೆಟ್ಟಿಗರಿಂದ ಭಾರೀ ಮೆಚ್ಚುಗೆ…
ಕೊರೊನಾದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಪಾತಳಕ್ಕಚ್ಚಿದೆ. ನಿರಾಶ್ರಿತರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಹೀಗಾಗಿ ಚಿಕ್ಕ ಮಕ್ಕಳಿಂದ ಸಿನಿಮಾ, ರಾಜಕಾರಣಿಗಳು, ದೊಡ್ಡ ಜನ ಪರಿಹಾರ ನೀಡಿದ್ದಾರೆ. ಸದ್ಯ ಈ ಸಾಲಿಗೆ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಸೇರಿದ್ದಾರೆ.
ಹೌದು… ಲಂಡನ್ನಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಬಳಸಿದ್ದ ಬ್ಯಾಟನ್ನು ಬಡ ಮಕ್ಕಳಿಗೆ ನೆರವು ನೀಡುವ ಉತ್ತಮ ಉದ್ದೇಶದಿಂದ ಹರಾಜಿಗಿಟ್ಟಿದ್ದು ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಾಹಲ್ ಬಡತನದಲ್ಲಿರುವ ಮಕ್ಕಳಿಗೆ ನೆರವಾಗುವ ಸಂಸ್ಥೆಗೆ ತಾವು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದರು. ಕನ್ನಡಿಗನ ಈ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ರಾಹುಲ್ ಸಹಿಯಿರುವ 2019ರ ವಿಶ್ವಕಪ್ ಬ್ಯಾಟ್, ಪ್ಯಾಡ್ಗಳು, ಗ್ಲೌಸ್ಗಳು, ಹೆಲ್ಮೆಟ್ಗಳು ಮತ್ತು ಕೆಲವು ಜೆರ್ಸಿಗಳನ್ನು ಹರಾಜಿಗಿಟ್ಟು ದೇಣಿಗೆ ಸಂಗ್ರಹಿಸಲು ಅವೇರ್ ಫೌಂಡೇಶನ್ ವಹಿಸಲಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಹುಲ್ ‘ಅವೇರ್ ಫೌಂಡೇಶನ್ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ನಿರ್ಧಾರ ನನ್ನ ಪಾಲಿಗೆ ವಿಶೇಷವೆನಿಸಿದೆ. ಮಕ್ಕಳಿಗೆ ನೆರವು ನೀಡುವುದಕ್ಕಾಗಿ ಇದಕ್ಕಿಂತ ಉತ್ತಮವಾದ ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ. ಫೌಂಡೇಶನ್ ಏಪ್ರಿಲ್ 20 ರಿಂದ ಹರಾಜು ಆರಂಭಿಸಲಿದೆ. ಹೀಗಾಗಿ ಹರಾಜಿನತ್ತ ಹೋಗಿ ನನ್ನ ಪ್ರೀತಿಯ ಮಕ್ಕಳಿಗೆ ಪ್ರೀತಿ ತೋರಿಸಿ’ ಎಂದಿದ್ದಾರೆ.