ಬುಧವಾರದಿಂದ ಅಂತಾರಾಜ್ಯ ಬಸ್ ಸಂಚಾರಕ್ಕೆ ಸರ್ಕಾರ ನಿರ್ಧಾರ!
ಕೊರೊನಾ ಆಕ್ರಮಣ ಮತ್ತು ಲಾಕ್ಡೌನ್ ಬಂಧನದಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಕೆಎಸ್ಆರ್ಟಿಸಿ ಜೂನ್ ಮೊದಲ ವಾರದಿಂದ ನಿಯಮಿತ ಸಂಚಾರ ಆರಂಭಿಸಿದೆ. ಆದರೂ, ನೆರೆಯ ರಾಜ್ಯಗಳ ಸಂಚಾರವನ್ನು ಆರಂಭಿಸಿರಲಿಲ್ಲ. ದಿನೇ ದಿನೇ ಚಟುವಟಿಕೆಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಬುಧವಾರದಿಂದ ಅಂತರರಾಜ್ಯ ಬಸ್ ಸಂಚಾರವನ್ನು ಆರಂಭಿಸಲು ಸರ್ಕಾರ ಸೂಚನೆ ನೀಡದೆ.
ಮೊದಲ ಹಂತದಲ್ಲಿ ಆಂಧ್ರ ಪ್ರದೇಶದೊಂದಿಗೆ ಬಸ್ಗಳ ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗಿದೆ. ಹವಾ ನಿಯಂತ್ರಣ (ಎಸಿ) ರಹಿತ ಬಸ್ಗಳು ಎರಡೂ ರಾಜ್ಯಗಳ ನಡುವೆ ಸಂಚರಿಸಲಿವೆ. ಲಾಕ್ಡೌನ್ ನಂತರ ಇದೇ ಮೊದಲ ಬಾರಿಗೆ ಎರಡು ರಾಜ್ಯಗಳ ನಡುವೆ ಬಸ್ಗಳ ಓಡಾಡಲಿವೆ.
“ಆಂಧ್ರ ಪ್ರದೇಶದ ಜೊತೆ ನಾವು ಹಂತ ಹಂತವಾಗಿ ಬಸ್ ಕಾರ್ಯಾಚರಣೆಯನ್ನು ಆರಂಭಿಸಲು ಉದ್ದೇಶಿಸಿದ್ದೇವೆ,” ಎಂದು ಹಿರಿಯ ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲ ಹಂತದಲ್ಲಿ ಬೆಂಗಳೂರು, ಬಳ್ಳಾರಿ, ರಾಯಚೂರು ಮತ್ತು ಶಹಾಪುರದಿಂದ ಆಂಧ್ರ ಪ್ರದೇಶದ ಹಲವು ಸ್ಥಳಗಳಿಗೆ ಬಸ್ಗಳು ಓಡಾಡಲಿವೆ. ಬೆಂಗಳೂರಿನಿಂದ ಅನಂತಪುರ, ಹಿಂದೂಪುರ, ಕದ್ರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೊದ್ದತೂರ್, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೋರ್ ಮತ್ತು ವಿಜಯವಾಡಕ್ಕೆ ಬಸ್ಗಳು ಸಂಚರಿಸಲಿವೆ.
ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಅಥವಾ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ಗಳ ಮೂಲಕ ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯು ತೆಲಂಗಾಣಕ್ಕೂ ಬಸ್ ಸೇವೆ ಆರಂಭಿಸಲು ಚಿಂತನೆ ನಡೆಸುತ್ತಿದೆ. ಆದರೆ ಕೊರೊನಾ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಮಾತ್ರ ಸದ್ಯಕ್ಕೆ ಯಾವುದೇ ಬಸ್ಗಳನ್ನು ಬಿಡುವ ಲಕ್ಷಣಗಳಿಲ್ಲ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರಲ್ಲಿ ಬಹುಸಂಖ್ಯೆಯ ಸೋಂಕಿತರು ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಂತಾರಾಜ್ಯ ಬಸ್ಗಳ ಸಂಚಾರ ಆರಂಭವಾಗುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಢಿಸಿದೆ
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಟ್ರಯಲ್ ದರ್ಶನ ಪಡೆದವನಿಗೆ ಕೊರೊನಾ; ಸೋಂಕಿತ ನಾಪತ್ತೆ!