ಬೆಂಗಳೂರು ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರದ ಭರಾಟೆ..! : ಗ್ರಾಹಕರಿಗೆ ಬೆಲೆ ಏರಿಕೆ ಬರೆ
ನಾಡಿನೆಲ್ಲೆಡೆ ದಸರಾ ಆಯುಧಪೂಜೆಯ ಸಂಭ್ರಮ ಕಳೆಕಟ್ಟಿದೆ. ಆಯುಧ ಪೂಜೆಗಳಿಗೆ ಭರದ ಸಿದ್ದತೆಗೆ ನಡೆಯುತ್ತಿದ್ದು, ಪೂಜಾ ಸಾಮಾಗ್ರಿಗಳ ಖರೀದಿಗೆ ಜನರು ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆನೇ ಗ್ರಾಹಕರು ದಸರಾ ಪೂಜೆಗೆ ಬೇಕಾಗುವ ಹೂ, ಹಣ್ಣು, ಕಾಯಿ ಮತ್ತು ತರಕಾರಿ ಖರೀದಿಗೆ ಆಗಮಿಸಿದ್ದಾರೆ. ನೂರಾರು ಜನ ಗ್ರಾಹಕರಿಂದ ಬೆಂಗಳೂರಿನ ಕೆ.ಆರ್ ಮಾರ್ಕೇಟ್ , ಗಾಂಧಿ ಬಜಾರ್, ಶಿವಾಜಿ ಮಾರ್ಕೆಟ್ ಹೀಗೆ ನಗರದ ಪ್ರತಿಷ್ಠಿತ ಮಾರುಕಟ್ಟೆಗಳಲ್ಲಿ ಹಾಗೂ ಮಾಲ್ ಗಳಲ್ಲಿ ಪೂಜೆ ಸಾಮಾಗ್ರಿಗಳ ಖರೀದಿ ಬಲುಜೋರಾಗೇ ನಡೆಯುತ್ತಿದೆ.
ಆದರೆ ಎಂದಿನಂತೆ ಈ ಬಾರಿಗೂ ಕೂಡ ಹಬ್ಬಕ್ಕೆ ಪೂಜಾ ಸಾಮಾಗ್ರಿ ಹಾಗೂ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದು ಾಯುಧ ಪೂಜೆ ಇರುವುದರಿಂದ ವಾಹನ, ಆಯುಧ, ಅಂಗಡಿ ಮುಗ್ಗಟ್ಟುಗಳಿಗೆ ಪೂಜೆ ಮಾಡಲಾಗುತ್ತಿದ್ದು, ಗ್ರಾಹಕರಿಗೆ ಹೂ, ಹಣ್ಣು, ಕಾಯಿ ಬೆಲೆ ಬಿಸಿ ಮುಟ್ಟಿಸಿದೆ.
ಒಂದು ಮಾರು ಸೇವಂತಿಗೆ ಹೂವು 100 ರಿಂದ 150 ರಂತೆ ಮಾರಾಟವಾಗುತ್ತಿದೆ. ವಾಹನ ಮತ್ತು ಅಂಗಡಿ ಮುಗ್ಗಟ್ಟುಗಳ ಮುಂದೆ ಕಟ್ಟುವ ಬಾಳೆ ಕಂಬಕ್ಕೂ ಹೆಚ್ಚಿನ ಬೇಡಿಕೆ ಇದೆ. ಸಣ್ಣ ಬಾಳೆ ಕಂಬದ ಬೆಲೆ ಜೋಡಿಗೆ 50 ರಿಂದ 60 ರೂಪಾಯಿ ಇದೆ.
ಕನಕಾಂಬರ ಪ್ರತಿ ಕೆಜಿಗೆ 1500 , ಮಲ್ಲಿಗೆ 2000 ರಷ್ಟಾಗಿದೆ. ಹಣ್ಣು ಮತ್ತು ತರಕಾರಿಗಳ ಬೆಲೆ ಕೂಡ ಅಧಿಕವಾಗಿದೆ. ಒಟ್ಟಿನಲ್ಲಿ ಬೆಲೆ ಎಷ್ಟೇ ಆದರೂ ಕೂಡ ಸಂಪ್ರದಾಯದಂತೆ ಹಬ್ಬವನ್ನು ಆಚರಿಸಬೇಕು. ಹೀಗಾಗಿ ಜನ ಬೆಲೆ ಬಿಸಿಯಲ್ಲಿ ಅತ್ಯಂತ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.