ಭಯೋತ್ಪಾದಕರ ಗುಂಡಿಗೆ ಸೇನಾಧಿಕಾರಿಗಳನ್ನು ಒಳಗೊಂಡು 5 ಯೋಧರು ಹುತಾತ್ಮ!

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರ ಗುಂಡಿಗೆ ಇಬ್ಬರು ಹಿರಿಯ ಸೇನಾಧಿಕಾರಿಗಳು ಒಳಗೊಂಡಂತೆ ಐವರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಸಶಸ್ತ್ರ ಪಡೆ ಮತ್ತು ಜಮ್ಮು ಕಾಶ್ಮೀರ ಭಯೋತ್ಪಾದನಾ ವಿರೋಧಿ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವಾರು ನಾಗರಿಕರನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ, ಇಬ್ಬರು ಭಯೋತ್ಪಾದಕರನ್ನು ಎನ್‌ಕೌಂಟರ್‌ ಮಾಡಲಾಗಿದೆ.

“ಕುಪ್ವಾರಾ ಜಿಲ್ಲೆಯ ಹಂದ್ವಾರ ಚಾಂಗಿಮುಲ್ಲಾದ ಮನೆಯೊಂದರಲ್ಲಿ ನಾಗರಿಕ ಕೈದಿಗಳನ್ನು ಭಯೋತ್ಪಾದಕರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸೇನಾ ಮತ್ತು ಜಮ್ಮು ಕಾಶ್ಮೀರ ಪೊಲೀಸರನ್ನು ಒಳಗೊಂಡ ಜಂಟಿ ತಂಡವು ನಾಗರೀಕರನ್ನು ಇರಿಸಲಾಗಿದ್ದ ಭಯೋತ್ಪಾದಕರ ತಾಣದ ಮೇಲೆ ದಾಳಿಮಾಡಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಸೈನ್ಯ ಮತ್ತು ಜಮ್ಮುಕಾಶ್ಮೀರ ಪೊಲೀಸರ ತಂಡವು ಗುರುತಿಸಲಾಗಿದ್ದ ಪ್ರದೇಶವನ್ನು ಪ್ರವೇಶಿಸಿ ಒತ್ತೆಯಿರಿಸಿದ್ದ ನಾಗರಿಕನನ್ನು ಯಶಸ್ವಿಯಾಗಿ ಹೊರತಂದಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ತಂಡವು ಭಯೋತ್ಪಾದಕರಿಂದ ಭಾರೀ ಪ್ರಮಾಣದ ಗುಂಡಿನ ಚಕಮಕಿಯನ್ನು ಎದುರಿಸಿದೆ” ಎಂದು ಹೇಳಲಾಗಿದೆ.

ದಾಳಿಯಲ್ಲಿ ಮೃತಪಟ್ಟ ಸೈನಿಕರು ಮತ್ತು ಭದ್ರತಾ ಸಿಬ್ಬಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿದರು. “ಹಂದ್ವಾರದಲ್ಲಿ ನಮ್ಮ ಸೈನಿಕರು ಮತ್ತು ಭದ್ರತಾ ಸಿಬ್ಬಂದಿಯ ನಷ್ಟವು ತುಂಬಾ ನೋವಿನ ವಿಷಯವಾಗಿದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಅವರು ಅನುಕರಣೀಯ ಧೈರ್ಯವನ್ನು ತೋರಿಸಿದರು. ದೇಶಕ್ಕೆ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಅವರ ಧೈರ್ಯ ಮತ್ತು ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ” ಎಂದು ರಾಜಾನಾಥ್ ಸಿಂಗ್ ಬರೆದಿದ್ದಾರೆ.

“ಕರ್ನಲ್ ಅಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್ ಮತ್ತು ಜಮ್ಮುಕಾಶ್ಮೀರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಕೀಲ್ ಖಾಜಿ ಸೇರಿದಂತೆ ಐವರು ಧೈರ್ಯಶಾಲಿ ಸಿಬ್ಬಂದಿಗಳು ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾಗಿದ್ದಾರೆ” ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಟಿಐಗೆ ತಿಳಿಸಿದ್ದಾರೆ.

ಜಮ್ಮುಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ “ಸುದೀರ್ಘ ಆತಂಕಿತ ರಾತ್ರಿಯ ನಂತರ, ಕೆಚ್ಚೆದೆಯ ವೀರರು ಹುತಾತ್ಮರಾಗಿದ್ದಾರೆಂಬ ದುಖದ ವಿಚಾರವನ್ನು ಕೇಳುತ್ತಿದ್ದೇವೆ” ಎಂದು ಟ್ವಿಟ್ಟರಿನಲ್ಲಿ ಬರೆದಿದ್ದಾರೆ.

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ “ಇಂದು ಬೆಳಿಗ್ಗೆ ಹಂದ್ವಾರದಲ್ಲಿ ಕರ್ತವ್ಯದ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಜವಾನರು ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಕೇಳುತ್ತಿದ್ದೇನೆ. ಅವರ ಆತ್ಮಗಳು ಶಾಂತಿಯನ್ನು ಕೋರುತ್ತಿದ್ದೇನೆ ಹಾಗೂ ಅವರ ಕುಟುಂಬಗಳು ಮತ್ತು ಸಹೋದ್ಯೋಗಿಗಳು ಅವರ ಅಗಲುವಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/OmarAbdullah/status/1256802028141117440

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights