ಮೈಸೂರಿನಲ್ಲಿ ಮುಂದುವರಿದ ಪಕ್ಷಿಗಳ ಮರಣ ಮೃದಂಗ : ಹೆಚ್ಚಾದ ಕೊಕ್ಕರೆಗಳ ಸಾವಿನ ಸಂಖ್ಯೆ
ಕೊರೊನಾ ಭೀತಿಯ ಜೊತೆಗೆ ಮೈಸೂರು ನಗರದಾದ್ಯಂತ ಮತ್ತಷ್ಟು ಹಕ್ಕಿಜ್ವರದ ಆತಂಕ ಹೆಚ್ಚಾಗಿ ಪಕ್ಷಿಗಳ ಮರಣ ಮೃದಂಗ ಮುಂದುವರಿದು ಆತಂಕ ಸೃಷ್ಟಿಮಾಡಿದೆ.
ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದರೆ, ಸಾಂಸ್ಕೃತ ನಗರಿ ಮೈಸೂರಿನಲ್ಲಿ ಕೊರೊನಾದ ಜೊತೆಗೆ ಹಕ್ಕಿಜ್ವರದ ಸಂಕಟ ಎದುರಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 1ರ ವ್ಯಾಪ್ತಿಯಲ್ಲಿರುವ ಹೆಬ್ಬಾಳ ಕೆರೆಯ ಆಸುಪಾಸಿನಲ್ಲಿ ಪ್ರತಿನಿತ್ಯ ಕೊಕ್ಕರೆಗಳ ಸಾವು ಮುಂದುವರಿದಿದೆ. ಕಳೆದ 10ದಿನಗಳಿಂದ ಸುಮಾರು 20ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಕೊಕ್ಕರೆಗಳು ಮರಗಳ ಮೇಲಿಂದ ಸತ್ತು ಕೇಳಕ್ಕೆ ಬೀಳುತ್ತಿವೆ. ಇತ್ತೀಚೆಗೆ ವಾರ್ಡ್ ನಂಬರ್ 55ರ ವ್ಯಾಪ್ತಿಯ ವಿದ್ಯಾರಣ್ಯಪುರಂನಲ್ಲೂ 12 ಕೊಕ್ಕರೆಗಳು ಸಾವನ್ನಪ್ಪಿದ್ದರಿಂದ ಹಕ್ಕಿಜ್ವರದ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಇದೀಗ ಹೆಬ್ಬಾಳ ಕೆರೆಯ ಆಸುಪಾಸಿನಲ್ಲಿ ಮತ್ತಷ್ಟು ಕೊಕ್ಕರೆಗಳ ಸಾವಿನಿಂದಾಗಿ ಹಕ್ಕಿಜ್ವರದ ಆತಂಕ ಹೆಚ್ಚಾಗಿದೆ. ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕೊಕ್ಕರೆಗಳ ದೇಹದ ಪರಿಶೀಲನೆ ನಡೆಸಿದ್ದಾರೆ. ಮೃತ ಕೊಕ್ಕರೆಗಳ ದೇಹದ ತುಣುಕುಗಳು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ನಿವಾಸಿಗಳ ಆಗ್ರಹಿಸಿದ್ದಾರೆ.