ಮೋದಿ ಕರೆಕೊಟ್ಟ ಚಪ್ಪಾಳೆಯಂತೂ ನಕಲು- ಸೇನಾ ಸೆಲ್ಯೂಟ್ ಕೂಡಾ ನಕಲೇ?
ಅಂದಹಾಗೆ…..ಇವತ್ತು ನಮ್ಮ ದೇಶದ ರಕ್ಷಣಾ ಪಡೆಗಳು-ಸೇನೆ-ವಾಯುಪಡೆ ಹಾಗು ನೌಕಾಪಡೆ ಮೂರೂ- ಕೋವಿಡ್ ಸಮರದ ಮುಂಚೂಣಿ ಯೋಧರಾದ ನಮ್ಮ ವೈದ್ಯಕೀಯ ಸಿಬ್ಬಂದಿಗಳಿಗೆ ಪುಷ್ಪಮಾಲೆ, ಸೆಲ್ಯೂಟ್ ಹಾಗು ದೀಪಾಲಂಕಾರಗಳ ಮೂಲಕ ಗೌರವ ಸಲ್ಲಿಸುತ್ತಾರಂತೆ.
ಆದರೆ, ಇಂದು ನಮ್ಮ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗು ಇತರರಿಗೆ ಬೇಕಿರುವುದು ಚಪ್ಪಾಳೆಯಲ್ಲ. ಕೊರೋನಾ ಇಂದ ರಕ್ಷಿಸಬಲ್ಲ ರಕ್ಷಾ ಕವಚಗಳು.
ಸರ್ಕಾರ ಅದನ್ನು ಸರಿಯಾಗಿ ಸರಬರಾಜು ಮಾಡದಿರುವುದರಿಂದಲೇ ಮಧ್ಯಪ್ರದೇಶದಲ್ಲಿ ಇಂದು ಅತಿ ಹೆಚ್ಚು ಕೋವಿಡ್ ಪೀಡಿತರಾಗಿರುವುದು ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು. ಹಾಗೆಯೇ ದೇಶದ ಎಲ್ಲಾಕಡೆಗಳಲ್ಲೂ ಅತಿ ಹೆಚ್ಚು ಕೋವಿಡ್ ಸೋಂಕಿತ ಸಮುದಾಯ ವೈದ್ಯಕೀಯ ಸಿಬ್ಬಂದಿಗಳೇ ಆಗಿದ್ದಾರೆ. ಇಷ್ಟಾದರೂ ಸರ್ಕಾರ ಕೊಡುತ್ತಿರುವುದು ಚಪ್ಪಾಳೆಯನ್ನೇ ಹೊರತು ರಕ್ಷಕ ಕಿಟ್ಗಳನ್ನಲ್ಲ.
ಅಷ್ಟು ಮಾತ್ರವಲ್ಲ… ಈ ಚಪ್ಪಾಳೆಯ ಐಡಿಯಾ ಕೂಡ ಭಾರತೀಯವಲ್ಲ….ವಿದೇಶದ ನಕಲು!!
ಆದರೂ, ನಾಗರಿಕರು ಹಾಗು ಸೇನಾಪಡೆಗಳು ಸ್ವಪ್ರೇರಣೆಯಿಂದ ಚಪ್ಪಾಳೆ ತಟ್ಟುತ್ತಿರುವುದು, ದೀಪ ಹಚ್ಚುತ್ತಿರುವುದು ನಮ್ಮ ದೇಶದಲ್ಲೇ ಪ್ರಥಮ.. ಇದನ್ನು ಈಗ ಇಡೀ ವಿಶ್ವವೇ ಕೊಂಡಾಡುತ್ತಿದೆ ಮತ್ತು ಆಚರಿಸುತ್ತಿದೆ ಎಂದು ಲಂಭಕ್ತರು ಮತ್ತು ಮಬ್ಬಾಕ್ತರು ಮಾತ್ರವಲ್ಲ ಸಾಕ್ಷಾತ್ ಪ್ರಧಾನಿಗಳೇ ಏಪ್ರಿಲ್ ೧೦ ರ ಭಾಷಣದಲ್ಲಿ ಹೇಳಿದ್ದಾರೆ.
1. ಪ್ರಧಾನಿ ಮೋದಿಯವರು ವೈದ್ಯಕೀಯ ಸಿಬ್ಬಂದಿಗಳ ಗೌರವದಲ್ಲಿ ಚಪ್ಪಾಳೆ ತಟ್ಟಲು ಆದೇಶ ಕೊಟ್ಟಿದ್ದು ಮಾರ್ಚ್ 22ಕ್ಕೆ. ಆದರೆ ಮೋದಿ ಸರ್ಕಾರ ಇದನ್ನು ನೇರವಾಗಿ ಇಟಲಿ ಮತ್ತು ಸ್ಪೇನ್ ನಿಂದ ನಕಲು ಮಾಡಿದ್ದು ಎಂಬುದನ್ನು ಸರ್ಕಾರವು ಹೇಳಲಿಲ್ಲ. ಮಾಧ್ಯಮಗಳು ಹೇಳಲಿಲ್ಲ..
ಏಕೆಂದರೆ ಸ್ಪೇನ್ ಹಾಗು ಇಟಲಿ ದೇಶದ ಜನ ಇದನ್ನು ಸ್ವಪ್ರೇರಣೆಯಿಂದ ಮಾರ್ಚ್ 14ರಂದು ತಮ್ಮ ದೇಶಾದ್ಯಂತ ಮಾಡಿದ್ದರು. ಇದನ್ನು ಜಗತ್ತಿನ ಮಾಧ್ಯಮಗಳೆಲ್ಲಾ ವರದಿ ಮಾಡಿದ್ದವು.
ಅದಾದ ಒಂದು ವಾರದ ನಂತರ ಅದನ್ನೇ ನಮ್ಮ ದೇಶದಲ್ಲಿ ನಕಲು ಮಾಡಲು ಮೋದಿ ಸರ್ಕಾರ ಕರೆ ಕೊಟ್ಟಿತು.
2. ಇಂದು ಸೇನಾ ಪಡೆಗಳು ವೈದ್ಯರಿಗೆ ಪುಷ್ಪವೃಷ್ಟಿ ಮಾಡುತ್ತಿವೆಯಷ್ಟೇ. ಇದೂ ಕೂಡಾ ಮೋದಿ ಸರ್ಕಾರದ ಒರಿಜಿನಾಲಿಟಿಯಲ್ಲ. ಅಮೇರಿಕಾದ ಸೇನಾಪಡೆಗಳು ಏಪ್ರಿಲ್ 28ರಂದು ತಮ್ಮ ದೇಶದಲ್ಲಿ ಈಗಾಗಲೇ ಮಾಡಿದ ಕಾರ್ಯಕ್ರಮವನ್ನು ಇಂದು ಮೇ-3ರಂದು- ಭಾರತದಲ್ಲಿ ನಕಲು ಮಾಡಲಾಗುತ್ತಿದೆ.
ಒಂದು ದೇಶದ ಅತ್ಯುತ್ತಮವಾದ ನಾಗರಿಕ ಮಾದರಿಯನ್ನು ಮತ್ತೊಂದು ದೇಶ ಅನುಸರಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ನಾವೇ ಮೊದಲು ಮಾಡುತ್ತಿರುವುದು ಎಂದು ಕೊಚ್ಚಿಕೊಳ್ಳುವುದು ಹಾಗು ಇಡೀ ದೇಶಕ್ಕೆ ಸುಳ್ಳು ಹೇಳುವುದು ನಾಗರಿಕವಲ್ಲ. ಅದರಿಂದ ಭಾರತವು ವಿಶ್ವಗುರುವಾಗುವುದಿರಲಿ ಜಗತ್ತಿನಾದ್ಯಂತ ನಗೆಪಾಟಲಿಗೀಡಾಗುತ್ತದೆ.
– ಶಿವಸುಂದರ್