ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಆರಂಭ : ಮೊದಲ ಪ್ರಯೋಗ ವೀಕ್ಷಿಸಲಿರುವ ಸಚಿವರು
ದೇಶದಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ತೃಪ್ತಿದಾಯಕವಾಗಿದ್ದು, ದೇಶದಾದ್ಯಂತ ಇದರ ಪ್ರಯೋಗ ಆರಂಭಿಸಲು ಚಿಂತನೆ ನಡೆದಿದ್ದು, ಇಂದಿನಿಂದ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭಿಸಲಾಗುವುದು.
ಹೌದು… ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ನಾಲ್ಕೈದು ದಿನಗಳಿಂದ ಕಡಿಮೆಯಾಗಿದ್ದ ಸೋಂಕಿತರ ಸಂಖ್ಯೆ ನಿನ್ನೆಯಿಂದ ಮತ್ತೆ ಏರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಆತಂಕ ಹೆಚ್ಚಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಪ್ರಯೋಗಕ್ಕೆ ಇಂದು ಚಾಲನೆ ನೀಡಲಾಗಿದ್ದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇಂದು ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಪ್ರಯೋಗವನ್ನು ವೀಕ್ಷಿಸಲಿದ್ದಾರೆ. ಕೊರೋನಾ ವೈರಸ್ನಿಂದಾಗಿ ತೀರಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಚಿಕಿತ್ಸೆಗೆ ಕೊರೋನಾದಿಂದ ಗುಣಮುಖನಾದ ವ್ಯಕ್ತಿಯ ರಕ್ತಕಣಗಳನ್ನು ಬಳಕೆ ಮಾಡಲಾಗುತ್ತದೆ. ಗುಣಮುಖನಾದ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿ ರೂಪುಗೊಂಡು 3ರಿಂದ 7 ದಿನಗಳಲ್ಲಿ ಗುಣಮುಖರಾಗುವ ನಿರೀಕ್ಷೆಯಿದೆ.ಈಗಾಗಲೇ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಯ ಪ್ರಯೋಗ ನಡೆಸಲಾಗಿದೆ. ಇದರಿಂದಾಗಿ ಕೊರೋನಾ ರೋಗಿಗಳು ಗುಣಮುಖರಾಗುವ ಭರವಸೆಯಿದೆ ಎಂದು ಅಲ್ಲಿನ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಕೇರಳದಲ್ಲಿ ಈಗಾಗಲೇ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದೆ. ಕರ್ನಾಟಕದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಲ್ಲಿಯೂ ಪ್ಲಾಸ್ಮಾ ಥೆರಪಿ ನಡೆಸಲು ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.