ಲಾಕ್ಡೌನ್ ನಿಯಮ ಉಲ್ಲಂಘನೆ: ಇಫ್ತಿಯಾರ್ ಔತಣಕೂಟ ಆಯೋಜಿಸಿದ ಬಿಜೆಪಿ ಮುಖಂಡ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಾತ ನಾಲ್ಕನೇ ಹಂತದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ಡೌನ್ನಲ್ಲಿ ಸಾಕಷ್ಟು ರಿಯಾಯಿತಿಗಳನ್ನು ನೀಡಲಾಗಿದೆಯಾದರೂ ಸಾಮಾಜಿಕ ಅಂತರ, ಮಾಸ್ಕ್ ಅನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಈ ನಿಯಮವನ್ನು ಬಿಜೆಪಿ ನಾಯಕರೇ ಉಲ್ಲಂಘಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಜೆಪಿ ನಾಯಕ ಹಾಗೂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು ಲಾಕ್ಡೌನ್ ಸಮಯದಲ್ಲಿ ಚಾಮರಾಜಪೇಟೆಯ ಮಸೀದಿಯಲ್ಲಿ ಭಾನುವಾರ ಸಂಜೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಾರೆ. ಈ ಕೂಟದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಯಾರೊಬ್ಬರೂ ಮಾಸ್ಕ್ ಕೂಡ ಧರಿಸಿಲ್ಲ ಮತ್ತು ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿಲ್ಲ.
ಭಾನುವಾರ ಸಂಜೆ ಅಬ್ದುಲ್ ಅಜೀಂ ನೇತೃತ್ವದಲ್ಲಿ ಇಫ್ತಾರ್ ಕೂಟ ನಡೆದಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ನೀಡಿಲ್ಲದಿದ್ದರೂ ಕೂಟ ಆಯೋಜನೆ ಮಾಡಲಾಗಿದೆ. ಇಡೀ ದೇಶಕ್ಕೆ ಒಂದು ಕಾನೂನಾದರೆ, ಬಿಜೆಪಿಗರಿಗೆ ಮಾತ್ರ ಯಾವ ಕಾನೂನು ಇಲ್ಲದಂತಾಗಿದೆ. ಜನ ಸಾಮಾನ್ಯರು ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳು ಇದೀಗ ಇವರ ವಿರುದ್ಧ ಯಾವ ಕ್ರಮ ಜರುಗಿಸಲಿದ್ದಾರೆ ಎಂಬುದನ್ನು ನೋಡಬೇಕಿದೆ.