ಲಾಕ್ ಡೌನ್ ಹಿನ್ನೆಲೆ ಮಗನ ಮೃತದೇಹ ಹೊತ್ತು ಬರೋಬ್ಬರಿ 88 ಕಿ.ಮೀ. ನಡೆದ ತಂದೆ…!
ವಿಶ್ವದ್ಯಾಂತ ಕೊರೊನಾ ತಂದಿಟ್ಟ ಆತಂಕ ಮನುಕುಲದ ಜೀವನ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋವನ್ನಾಗಿಸಿದೆ. ಇದಕ್ಕೆ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ತಿನ್ನಲು ಆಹಾರವಿಲ್ಲದೇ, ಇರಲು ಸೂರಿಲ್ಲದೇ, ಮಾಡಲು ಕೆಲಸವಿಲ್ಲದೇ ಶೋಚನೀಯ ಸ್ಥಿತಿಗೆ ತಂದುಬಿಟ್ಟಿದೆ. ಇಲ್ಲೊಬ್ಬ ಕೂಲಿ ಕಾರ್ಮಿಕನ ಕಥೆ ಕೇಳಿದ್ರೆ ನಿಮಗೆ ಕಣ್ಣಲ್ಲಿ ನೀರು ಬಾರದೇ ಇರದು.
ಹೌದು… ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗೊರಂಟ್ಲ ಗ್ರಾಮದ ಕೂಲಿ ಕಾರ್ಮಿಕ ಮಂಚಲ ಮನೋಹರ್ ಎಂಬಾತ ಸಾರಿಗೆ ಇಲ್ಲದೇ ತನ್ನ ಮಗನ ಅಂತ್ಯ ಸಂಸ್ಕಾರಕ್ಕಾಗಿ 88 ಕಿ.ಮೀ ಟರ್ ನಡೆದುಕೊಂಡೇ ಹೋದ ಮನಕಲುಕುವ ಘಟನೆ ನಡೆದಿದೆ.
5 ವರ್ಷದ ಬಾಲಕ ಇತ್ತೀಚೆಗೆ ಗಂಟಲು ನೋವಿನಿಂದ ಬಳಲುತ್ತಿದ್ದ. ಮನೋಹರ್ ತನ್ನ ಮಗನನ್ನು ಮೊದಲು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾನೆ. ಆದರೆ ಬಾಲಕನ ಆರೋಗ್ಯ ಸ್ಥಿತಿ ಇನ್ನೂ ಹದಗೆಟ್ಟಾಗ ಹಿಂದೂಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಲ್ಲಿ ಪರೀಕ್ಷಿಸಿದ ವೈದ್ಯರು ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನೋಹರ್ಗೆ ತಿಳಿಸಿದ್ದಾರೆ. ಆದರೆ ಮನೋಹರ್ಗೆ ಅಷ್ಟು ಶಕ್ತಿ ಇರಲಿಲ್ಲ. ಬುಧವಾರ ಬಾಲಕನ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸುರಿಯಲು ಶುರುವಾಗಿತ್ತು. ದುರಾದೃಷ್ಟವಶಾತ್ ಆತ ಮೃತಪಟ್ಟಿದ್ದ.
ಲಾಕ್ಡೌನ್ ಹಿನ್ನೆಲೆ ದೇಶದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಮನೋಹರ್ ತನ್ನ ಮಗನ ಅಂತ್ಯಸಂಸ್ಕಾರ ಮಾಡಲು ಮೃತದೇಹವನ್ನು ಹೊತ್ತು ಬರೋಬ್ಬರಿ 88 ಕಿ.ಮೀ.ನಡೆದಿದ್ದಾನೆ. ಬಳಿಕ ಚಿತ್ರಾವತಿ ನದಿ ದಂಡೆಯಲ್ಲಿ ತನ್ನ ಮಗನ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.