‘ವಿಜಯ್ ಮಲ್ಯ ಆಶ್ರಯ ಕೋರಿಕೆ ಪರಿಗಣಿಸಬೇಡಿ’ ಯುಕೆಗೆ ಭಾರತ ಮನವಿ
ಬ್ಯಾಂಕಿನಿಂದ ಸಾವಿರಾರು ಕೋಟಿ ಸಾಲ ಪಡೆದು ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ವಿಜಯ್ ಮಲ್ಯ ಇಂಗ್ಲೆಂಡ್ ನಲ್ಲಿ ಸಲ್ಲಿಸಿರುವ ರಾಜಕೀಯ ಆಶ್ರಯ ಮನವಿಯನ್ನು ತಿರಸ್ಕರಿಸುವಂತೆ ಭಾರತ ಯುಕೆಗೆ ಮನವಿ ಮಾಡಿದೆ.
ಉದ್ಯಮಿ ವಿಜಯ್ ಮಲ್ಯ ಯುನೈಟೆಡ್ ಕಿಂಗ್ಡಂನಲ್ಲಿ ಆಶ್ರಯ ಕೋರಿರುವುದನ್ನು ತಿರಸ್ಕರಿಸುವಂತೆ ಭಾರತ ಬ್ರಿಟಿಷ್ ಸರ್ಕಾರವನ್ನು ಕೇಳಿದೆ. ಭಾರತಕ್ಕೆ ಮಲ್ಯರನ್ನು ವಾಪಸ್ ಕರೆ ತರುವ ದೃಷ್ಟಿಯಿಂದ ಸಾಕಷ್ಟು ಪ್ರಯತ್ನಗಳನ್ನು ಭಾರತ ಸರ್ಕಾರ ಕೈಗೊಳ್ಳುತ್ತಿದೆ. ಹೀಗಾಗಿ ಮಲ್ಯ ಅವರ ಆಶ್ರಯ ಕೋರಿಕೆಯನ್ನು ಪರಿಗಣಿಸಬೇಡಿ ಎಂದು ಭಾರತ ಬ್ರಿಟನ್ಗೆ ಒತ್ತಾಯಿಸಿದೆ.
ವಿದೇಶಾಂಗ ಸಚಿವಾಲಯದ (ಎಂಎಇ) ವಕ್ತಾರ ಅನುರಾಗ್ ಶ್ರೀವಾಸ್ತವ, ವಿಜಯ್ ಮಲ್ಯ ಅವರ ಪರವಾಗಿ ವಿನಂತಿಸಿದರೆ ವಿಜಯ್ ಮಲ್ಯ ಅವರ ಆಶ್ರಯವನ್ನು ಪರಿಗಣಿಸದಂತೆ ನಾವು ಬ್ರಿಟನ್ ಗೆ ವಿನಂತಿಸಿದ್ದೇವೆ ಎಂದು ಹೇಳಿದರು. ಏಕೆಂದರೆ ಭಾರತದಲ್ಲಿ ವಿಜಯ್ ಮಲ್ಯ ಅವರಿಗೆ ತೊಂದರೆಯಾಗಲಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಬ್ರಿಟನ್ಗೆ ಸ್ಪಷ್ಟಪಡಿಸಲಾಗಿದ್ದು ಶ್ರೀವಾಸ್ತವ ಅವರ ಪ್ರಕಾರ ಮಲ್ಯರನ್ನು ಶೀಘ್ರದಲ್ಲೇ ಹಸ್ತಾಂತರಿಸುವುದಕ್ಕಾಗಿ ಭಾರತವು ಯುಕೆ ಜೊತೆ ನಿರಂತರ ಸಂಪರ್ಕದಲ್ಲಿದೆ.
ಕೆಲವೇ ದಿನಗಳ ಹಿಂದೆ ಭಾರತಕ್ಕೆ ಗಡಿಪಾರು ಮಾಡದಂತೆ ರಕ್ಷಣೆ ನೀಡಲು ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ಬ್ರಿಟನ್ ನ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತಗೊಂಡಿತ್ತು. ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂಬ ಸುದ್ದಿ ಕೂಡ ಕೇಳಿಬಂದಿತ್ತು.