ವೀಕೆಂಡ್ ವಿಥ್ ರಮೇಶ್ನಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಯಶ್
ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು, ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ.
ವೀಕೆಂಡ್ ವಿಥ್ ರಮೇಶ್ ಕನ್ನಡ ಕಿರುತೆರೆ ಲೋಕದ ಬೆಸ್ಟ್ ರಿಯಾಲಿಟಿ ಶೋಗಳಲ್ಲೊಂದು. ಶನಿವಾರ, ಭಾನುವಾರ ಬಂತೆಂದರೇ ಸಾಕು ಜನರ ಕಣ್ಣಾಲಿಗಳು ಒದ್ದೆಯಾಗ್ತಿದ್ವು. ನೆಚ್ಚಿನ ನಟರ ಸುಖ-ದುಃಖದ ಕಥೆಗಳ ನೋಡಿ ಖುಷಿ ಪಡುತ್ತಿದ್ದರು. ಸಾಧನೆ ಮಾಡಬೇಕೆಂದಿರುವ ಅದೆಷ್ಟೋ ಜನರಿಗೆ ಸ್ಫೂರ್ತಿ ಆಗಿತ್ತು. ಅಷ್ಟರ ಮಟ್ಟಿಗೆ ಜನರ ಮೇಲೆ ಪ್ರಭಾವ ಬೀರಿತ್ತು ಈ ಶೋ. ಕೋಟ್ಯಾಂತರ ಮಂದಿಯ ಮೆಚ್ಚುಗೆ ಕೂಡ ಗಳಿಸಿತ್ತು. ಇದೀಗ ಮತ್ತೊಮ್ಮೆ ಪುನೀತ್ ರಾಜ್ಕುಮಾರ್ ಮತ್ತು ಯಶ್ ಲೈಫ್ ಸ್ಟೋರಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ. ಅಭಿಮಾನಿಗಳಿಂದಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು. ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು.
ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು,ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು. ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. 2002 ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ `ಅಪ್ಪು’ ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ನಂತರ ತೆರೆಗೆ ಬಂದ ಅಭಿ,ವೀರ ಕನ್ನಡಿಗ,ಮೌರ್ಯ,ಆಕಾಶ್, ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು.
ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್,ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.
ಯೆಸ್ ವಿಕೆಂಡ್ ವಿಥ್ ರಮೇಶ್ ನ ಮೊದಲ ಎಪಿಸೋಡ್ ವಿಥ್ ಪುನೀತ್ ರಾಜ್ಕುಮಾರ್ ಈ ಲಾಕ್ ಡೌನ್ ಸಮಯದಲ್ಲಿ ನಿಮ್ಮ ಜೀ಼ ಕನ್ನಡದಲ್ಲಿ ಮರು ಪ್ರಸಾರವಾಗಲಿದೆ.
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿ ಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.
1986 ಜನವರಿ 8 ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು `ಬಿ.ಎಂ.ಟಿ.ಸಿ’ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಎಲ್ಕೆಜಿಯಿಂದ ಕಾಲೇಜಿನವರೆಗೆ ಮೈಸೂರಿನ ಮಹಾವೀರ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ ಯಶ್ ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯವಾಗಲು ಪಿಯುಸಿಗೆ ಗುಡ್ಬೈ ಹೇಳಿ ಕೆಲಸ ಮಾಡಲು ಪ್ರಾರಂಭಿಸಿದರು. `ನವೀನ್ ಪ್ರಾವಿಜನ್ ಸ್ಟೋರ್’ ಎಂಬ ತಮ್ಮದೇ ಸ್ಟೋರ್ ತೆಗೆದು ಕುಟುಂಬದ ಜಾವಾಬ್ದಾರಿ ವಹಿಸಿಕೊಂಡರು.
ಅಂದು ಪ್ರಾವಿಜನ್ ಸ್ಟೋರ್ ಇಟ್ಟುಕೋಂಡು ಜೀವನ ನಡೆಸುತ್ತಿದ್ದ ನವೀನ್ ಕುಮಾರ್ ಯಶ್ ಆಗಿದ್ದು ಹೇಗೆ ಅನ್ನೋ ರೋಚಕ ಸಂಚಿಕೆ ವಿಕೆಂಡ್ ವಿಥ್ ರಮೇಶ್ ಎಪಿಸೋಡ್ ಮರು ಪ್ರಸಾರವಾಗುತ್ತಿದೆ. ಏಪ್ರಿಲ್ 25 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪುನೀತ್ ರಾಜ್ಕುಮಾರ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಯಶ್ ಎಪಿಸೋಡ್ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.