ಸರ್ಕಾರ ನಡೆಸುತ್ತಿರುವವರು ಸ್ಪಷ್ಟತೆಯಿಲ್ಲದೆ ಮೂರ್ಖರಾಗಿದ್ದಾರೆ: ರಾಹುಲ್ ಗಾಂಧಿ
“ಭಾರತವು ಕೊರೋನ ವೈರಸ್ ಗಾಗಿ ಮಾತ್ರವಲ್ಲದೆ ಆರ್ಥಿಕ ವಿನಾಶಕ್ಕೂ ತನ್ನನ್ನು ಸಿದ್ಧಪಡಿಸಿಕೊಳ್ಳಬೇಕು” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊರೊನ ವೈರಸ್ಗೆ ಭಾರತದಲ್ಲಿ 126 ಜನರು ಒಳಗಾಗಿದ್ದಾರೆ ಹಾಗೂ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
“ಭಾರತೀಯ ಆರ್ಥಿಕತೆಯು ಧ್ವಂಸವಾಗಲಿದೆ. ದೇಶವು ಅನುಭವಿಸುವ ಕಷ್ಟದ ಬಗ್ಗೆ ನಿಮಗೇನೂ ಗೊತ್ತಿಲ್ಲ, ಅದು ಸುನಾಮಿಯಂತೆ ಬರಲಿದೆ” ಎಂದು ರಾಹುಲ್ ಗಾಂಧಿ ಸುದ್ದಿಗಾರೊಂದಿಗೆ ಹೇಳಿದ್ದಾರೆ.
ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಸುನಾಮಿ ಬಂದದ್ದನ್ನು ಉದಾಹರಣೆ ನೀಡಿದ ರಾಹುಲ್ ಗಾಂಧಿ “ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ… ಆದರೆ ಅವರು ಮೂರ್ಖರಾಗಿದ್ದಾರೆ, ಏನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟತೆಯೇ ಇಲ್ಲ. ಭಾರತವು ಕೊರೋನಾ ವೈರಸ್ ಗಾಗಿ ಮಾತ್ರ ಅಲ್ಲ, ಬರಲಿರುವ ಆರ್ಥಿಕ ವಿನಾಶಕ್ಕೂ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳಬೇಕು”ಎಂದು ಹೇಳಿದರು.
“ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ … ವಿಷಾದದಿಂದ ಹೇಳುತ್ತಿದ್ದೇನೆ ಮುಂದಿನ ಆರು ತಿಂಗಳಲ್ಲಿ ನಮ್ಮ ಜನರು ಸಹಿಸಲಾಗದ ನೋವನ್ನು ಅನುಭವಿಸಲಿದ್ದಾರೆ” ಎಂದು ಹೇಳಿದರು.
ಕಳೆದ ವಾರ ಭಾರತದ ಮಾರುಕಟ್ಟೆ ತೀವ್ರ ಹಿನ್ನಡೆ ಅನುಭವಿಸಿದಾಗ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ “ಮೂರ್ಖತನದಲ್ಲಿರುವ ಸರಕಾರ” ಎಂದು ಆರೋಪಿಸಿದ್ದರು.