‘ಸವರ್ಣ ದೀರ್ಘ ಸಂಧಿ’ ಚಿತ್ರದ ವಿಮರ್ಶೆ : ನಗಿಸೋ ಪಾಸಿಟೀವ್ ರೌಂಡಿಸಂ.. ಪ್ರೀತಿಸೋ ಕನ್ನಡ ಪ್ರೇಮಿಸಂ..
ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ರಾಜ್ಯಾದಾದ್ಯಂತ ರಿಲೀಸ್ ಆಗಿರೋ ಕನ್ನಡದ ನಿರೀಕ್ಷಿತ ಚಿತ್ರ ಸವರ್ಣದೀರ್ಘ ಸಂಧಿ, ಸಾಕಷ್ಟು ವಿಚಾರಗಳಿಂದ ಸದ್ದು ಸುದ್ದಿ ಮಾಡಿದ್ದ ಈ ಚಿತ್ರವನ್ನ ಸಿನಿಪ್ರಿಯರು ಅಪ್ಪಿದ್ದಾರೆ.. ಒಪ್ಪಿದ್ದಾರೆ..ಚಪ್ಪಾಳೆ ತಟ್ಟಿದ್ದಾರೆ. ಯಾಕಂದ್ರೆ, ಕನ್ನಡ ಅನ್ನೋ ಮೂರು ಅಕ್ಷರದ ಪ್ರೀತಿ, ಸವರ್ಣದೀರ್ಘ ಸಂಧಿ ಅನ್ನೋ ವ್ಯಾಕರಣದ ಮಂತ್ರ ಅಂತಹ ಜಾದುವನ್ನ ಮಾಡಿದೆ.
ಸವರ್ಣ ದೀರ್ಘ ಸಂಧಿ ತುಳು ಚಿತ್ರರಂಗದ ಸೂಪರ್ ಹಿಟ್ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿರೋ ಸಿನಿಮಾ. ಹಾಗಂತ ಕಥೆಯೇನೂ ತುಂಬಾ ಕ್ಲಿಷ್ಟಕರ ಕಥೆಯೇನಲ್ಲ.. ಸಾಧಾರಣ ಕಥೆಯನ್ನಿಟ್ಟುಕೊಂಡು, ಅದ್ಭುತ ಸಿನಿಮಾ ವ್ಯಾಕರಣದಲ್ಲಿ, ಹಾಸ್ಯಗವನದ ರೂಪದಲ್ಲಿ, ರಮಿಸೋ ಕವಿತೆಯ ರೂಪದಲ್ಲಿ, ನಲಿಸೋ ಸಾಹಿತ್ಯದ ಚಂದದಲ್ಲಿ, ಈ ತಲೆಮಾರಿಗೆ ಭಾಷೆಯ ಅರಿವು ಮೂಡಿಸೋ, ಪಾಸಿಟೀವ್ ದರ್ಪದಲ್ಲಿ ಸಮಾಜಿಕ ಕಳಕಳಿಯನ್ನ ಬಂಬಿಸೋ ಒಂದು ವೀಶಿಷ್ಠ ಪ್ರಯತ್ನ ಇದಾಗಿದೆ.
ಈ ಚಿತ್ರದಲ್ಲಿ ಬಹುಮುಖವಾಗಿ ನಿರ್ದೇಶಕ, ನಟ, ವೀರೇಂದ್ರ ಶೆಟ್ಟಿ ಇಷ್ಟವಾಗ್ತಾರೆ.. ಇವ್ರ ಸಂಭಾಷಣೆ ನಿರೂಪಣೆ ನಟನೆ ಬೊಂಬಾಟ್. ನಾಯಕಿ ಕೃಷ್ಣ ಮೊದಲ ಸಿನಿಮಾದಲ್ಲೇ ನಮ್ಮುಡುಗಿ ಅನ್ನಿಸೋವಷ್ಟು ಭಾವಾಭಿನಯವನ್ನ ಮಾಡಿದ್ದಾರೆ. ಉಳಿದೆಲ್ಲಾ ಪಾತ್ರಗಳೂ ಇಷ್ಟವಾಗ್ತಾವೆ. ಚಿತ್ರಕ್ಕೆ ಲೋಕನಾಥ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ ಗಮನ ಸೆಳೆಯುತ್ತೆ.
ಮನೋಮೂರ್ತಿಯವರ ಸಂಗೀತ ಸವರ್ಣ ದೀರ್ಘ ಸಂಧಿ ಚಿತ್ರಕ್ಕೆ ಮುಕುಟ. ಹಾಡುಗಳೆಲ್ಲಾವೂ ನೆನಪಲ್ಲಿ ಉಳಿತಾವೆ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಟೆಕ್ನಿಕಲಿ ಈ ಸಿನಿಮಾ ತುಂಬಾ ಅದ್ಧೂರಿಯಾಗಿ ಮೂಡಿ ಬಂದಿದ್ದು, ಹಾಸ್ಯ ಪ್ರಧಾನವಾಗಿ , ಪ್ರೀತಿ ಪ್ರಧಾನವಾಗಿ, ಭಾಷೆ ಪ್ರಧಾನವಾಗಿ, ಎಲ್ಲಾ ಆಂಗಲ್ ನಿಂದ್ಲೂ ಸಿನಿಮಾ ನಗಿಸುತ್ತೆ, ಅಳಿಸುತ್ತೆ.. ಪ್ರೀತಿ ತೋರಿಸುತ್ತೆ.. ಓವರ್ ಆಲ್ ಆಗಿ ಕಾಸ್ ಕೊಟ್ಟು ಥಿಯೇಟರಿಗೆ ಬೋರ ಪ್ರೇಕ್ಷಕರಿಗೆ ಮೋಸ ಮಾಡ್ದೇ ರಂಜಿಸುತ್ತೆ.
ಸವರ್ಣ ದೀರ್ಘ ಸಂಧಿ.. ಸಿನಿಮಾದ ಟೈಟಲ್ಲೇ ಹೇಳುವಂತೆ.. ಇದು ಅಪ್ಪಟ ಕನ್ನಡ ಭಾಷೆಯ ಕಂಪನ್ನ ಸೂಸುವಂತ, ಕನ್ನಡದ ಯುವ ಸಮುದಾಯವನ್ನ ಕಣಕುವ.. ಕನ್ನಡೇತರರನ್ನ ಕನ್ನಡ ಮಾತನಾಡುವಂತೆ ಪ್ರೇರೇಪಿಸುವ.. ನಗಿಸೋ.. ಪ್ರೀತಿಸೋ… ಪರಿಶುದ್ಧವಾಗಿ ರಂಜಿಸೋ ಮುದ್ದಾದ ಕಥೆ. ಹಲವು ವಿಶೇಷ ವಿಚಾರಗಳಿಂದ ಗಮನ ಸೆಳೆದಿದ್ದ ಈ ಚಿತ್ರ ಇಂದು ರಾಜ್ಯದಾದ್ಯಂತ ಪ್ರೇಕ್ಷಕರೆದುರಿಗೆ ಬಂದಿದೆ. ಟ್ರೈಲರ್ ಮತ್ತು ಹಾಡುಗಳಿಂದ ಇಂಟ್ರೆಸ್ಟಿಂಗ್ ಎನ್ನಿಸಿದ್ದ ಸವರ್ಣ ದೀರ್ಘ ಸಂಧಿ ಕನ್ನಡ ಸಿನಿಪ್ರಿಯರ ಮನಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಜೀತಪದ್ದತಿಗೆ ಸಿಲುಕಿದ ಬಾಲಕನೊಬ್ಬ ಬಾಲ್ಯದಲ್ಲೇ ಸ್ನೇಹಿತನೊಬ್ಬನ ಜೊತೆಗೆ ಕನ್ನಡ ಮೇಷ್ಟ್ರ ಮನೆ ಕೆಡೆ ಹೋಗಿ ಕನ್ನಡ ಕಲಿಯುತ್ತಾನೆ. ಬಾಲ್ಯದಲ್ಲೇ ಕನ್ನಡ ವ್ಯಾಕರಣ ಪಾಂಡಿತ್ಯವನ್ನ ಕಲಿತ ನಾಯಕನಿಗೆ ಅಧೇ ಕನ್ನಡ ಮೇಷ್ಟ್ರ ಮಗಳ ಜೊತೆಗೆ ಪರಿಚಯವಾಗುತ್ತೆ. ಸೀನ್ ಕಟ್ ಮಾಡಿದ್ರೆ, ಹೀರೋ ಬದುಕ ಹರಸಿ ಸಿಟಿಗೆ ಬಂದಾಗ ಅದೇ ಕನ್ನಡ ಪಾಂಡಿತ್ಯದಿಂದ ಪೈಲ್ವಾನ್ ಅನ್ನೋ ರೌಡಿ ಬಳಗ ಸೇರ್ತಾನೆ. ಪೈಲ್ವಾನ್ ಕಾಲಾವಾದ ನಂತ್ರ ಆ ಗ್ಯಾಂಗ್ ನ ನಾಯಕ ಮುದ್ದಣ್ಣ ನಡೆಸ್ತಾನೆ.
ಅಪ್ಪಟ ಕನ್ನಡ ವ್ಯಾಕರಣವನ್ನೇ ಆಯುಧವನ್ನಾಗಿಸಿಕೊಟ್ಟುಕೊಂಡು ಫೀಲ್ಡಿಗೆ ಇಳಿತಾನೆ. ಪಾಸಿಟೀವ್ ರೌಡಿಸಂ ಹೆಸರಲ್ಲಿ, ಒಳ್ಳೆಯ ಕೆಲಸಗಳಿಗೆ ರೌಡಿಸಂನ ಕಾಯಕವನ್ನ ಮುಂದುವರೆಸ್ತಾನೆ. ಆಗ ಕಪಾಲೀಶ್ವರ್ ಅನ್ನೋ ಪೊಲೀಸ್ ಎಂಟ್ರಿಕೊಡ್ತಾನೆ. ಅಲ್ಲಿಂದ ಶುರುವಾಗೋ ವ್ಯಾಕರಣ ಯುದ್ಧ ನಾಯಕನ ಬದುಕಲ್ಲಿ ಬಿರುಗಾಳಿ ಎಬ್ಬಿಸುತ್ತೆ. ಬಾಲ್ಯದ ಗೆಳತಿ ಹರೆಯಕ್ಕೆ ಬಂದ ಸಿಕ್ಕರೂ ಆಕೆಯ ಪ್ರೀತಿ ಫೇಲ್ ಆಗುತ್ತೆ.. ಅಲ್ಲಿಂದ ಕಥೆ ಹುಟ್ಟಿಸೋ ಕುತೂಹಲ ಮಜವಾಗಿದ್ದು, ನಾಯಕನ ಪ್ರೀತಿಗೆ ವಿಲನ್ ಗಳಾಗಿರೋರನ್ನ ಕಂಡುಹಿಡಿಯೋ ಎಪಿಸೋಡ್ ನೋಡುಗರನ್ನ ನಗೆಗಡಲಲ್ಲಿ ತೇಲಿಸುತ್ತಲೇ, ಸೀಟಿನ ತುದಿಗೆ ತಂದು ಕೂರಿಸಿರುತ್ತೆ.
ಈ ಚಿತ್ರದಲ್ಲಿ ನಾಯಕನಾಗಿ ನಿರ್ದೇಶಕನಾಗಿ ಸಂಭಾಷಣೆಕಾರನಾಗಿ ವೀರೇಂದ್ರ ಶೆಟ್ಟಿ ಮಲ್ಟಿ ಕೆಲಸಗಳನ್ನ ಮಾಡಿ ಮ್ಯಾಜಿಕ್ ಮಾಡಿದ್ದಾರೆ.. ಅಭಿನಯದಲ್ಲಿ ಸೂಪರ್ ಎನ್ನಿಸಿಕೊಂಡ್ರೆ, ಡೈಲಾಗ್ ನಲ್ಲಿ ಎಕ್ಸೆಲೆಂಟ್ ಅನ್ನಿಸಿಕೊಳ್ತಾರೆ..ಅಮೃತವರ್ಷಿಣಿ ಪಾತ್ರದಾರಿ ನಾಯಕಿ ಕೃಷ್ಣ ಚೊಚ್ಚಲ ಚಿತ್ರದಲ್ಲೇ ಮೆಚ್ಚುವಂತಹ ನ್ಯಾಚ್ಯುರಲ್ ಅಭಿನಯ ಮಾಡಿದ್ದಾರೆ. ಪದ್ಮಜರಾವ್ ಸೇರಿದಂತೆ ಉಳಿದ ತಾರಾಗಣ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿವೆ.
ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿರೋ ಸವರ್ಣ ದೀರ್ಘ ಸಂಧಿಯಲ್ಲಿ ಲೋಕನಾಥ್ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತೆ. ಸಂಕೇತ್ ಶಿವಪ್ಪ ಸಂಕಲನ ಇಂಪ್ರೆಸೀವ್ ಆಗಿದೆ.. ಮನೋಮೂರ್ತಿಯವರ ಸಂಗೀತ ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ.. ಹಾಡುಗಳು ಕೇಳೋದಕ್ಕೆ ಇಂಪಾಗಿದ್ದು, ನೋಡೋದಕ್ಕೂ ಅಷ್ಟೇ ಮಜಭೂತಾಗಿ ಮೂಡಿಬಂದಿವೆ.. ಕಥೆಗೆ ತಕ್ಕಂತೆ ಚಿತ್ರಿಸಿರೋ ಎಲ್ಲಾ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗುಕೊಟ್ಟಿದೆ.. ವೀರೇಂದ್ರ ಶೆಟ್ಟಿ, ಮನೋಮೂರ್ತಿ. ಪಿವಿಆರ್ ಹೇಮಂತ್ ನಿರ್ಮಾಣವಿರೋ ಸವರ್ಣದೀರ್ಘ ಸಂಧಿ, ಹೊಸ ತಂಡದ ಪ್ರಯತ್ನ ಅನ್ನಿಸಿಕೊಂಡ್ರು, ಈ ಪ್ರಯತ್ನ ಕನ್ನಡ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ.. ಇಲ್ಲಿ ನಗುವಿದೆ.. ಪ್ರೀತಿಯಿದೆ.. ಎಮೋಷನ್ ಇದೆ.. ಎಲ್ಲಾದಕ್ಕಿಂತ ಹೆಚ್ಚಾಗಿ ಕನ್ನಡದ ಕಂಪು ಇಂಪು ಸೊಗಸಾಗಿದೆ. ಈ ಎಲ್ಲಾ ಕಾರಣಕ್ಕೆ ಈ ಸಿನಿಮಾವನ್ನ ಕನ್ನಡಿಗರು ಪ್ರೀತಿಯಿಂದ ನೋಡಬೇಕಿದೆ. ಹಾರೈಸಬೇಕಿದೆ.