Ayodhya : ಸುಪ್ರೀಂ ತೀರ್ಪಿನ ವಿರುದ್ದ ಪುನರ್ ಪರಿಶೀಲನ ಅರ್ಜಿ ಸಲ್ಲಿಸಲು ನಿರ್ಧಾರ….
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಸರ್ವಸಮ್ಮತ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಮಾನಿಸಿದೆ.
ಲಕ್ನೋದಲ್ಲಿ ಭಾನುವಾರ ನಡೆದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ಈ ನಿರ್ಧಾನ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ಮಸೀದಿ ಜಾಗವನ್ನು ಬಿಟ್ಟು ಇತರೆ ಯಾವುದೇ ಭೂಮಿಯನ್ನು ಕೊಟ್ಟರೂ ನಾವು ಒಪ್ಪಿಕೊಳ್ಳುವುದಿಲ್ಲ ಸುಪ್ರೀಂಕೋರ್ಟ್ನ ಭೂಮಿ ನೀಡುವ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದಿಲ್ಲ. ಎಂದು ಎಐಎಂಪಿಎಲ್ಬಿ ಸದಸ್ಯ ಇಲ್ಯಾಸ್ ಸ್ಪಷ್ಟಪಡಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಡಳಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲು ಒಮ್ಮತದ ನಿರ್ಣಯಕ್ಕೆ ಬಂದಿದೆ ಎಂದರು.
ಈ ನಡುವೆ ಜಮಿಯತ್ ಉಲಾಮ್ ಐ ಹಿಂದ್ ಸಂಘಟನೆಯೂ ಕೂಡ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟನೆಯ ಮುಖಂಡ ಮಹಮದ್ ಮದನಿ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಈ ತೀರ್ಮಾನವನ್ನು ಜಮಿಯಾತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರೆ ನೂರಕ್ಕೆ ನೂರರಷ್ಟು ತಿರಸ್ಕೃತವಾಗುತ್ತದೆ ಎಂಬುದು ನಮಗೆ ಗೊತ್ತು. ಆದರೂ ನಾವು ಅರ್ಜಿ ಸಲ್ಲಿಸುತ್ತೇವೆ. ಇದು ನಮ್ಮ ಹಕ್ಕು ಎಂದು ಮದನಿ ಹೇಳಿದ್ದಾರೆ.