Fact Check: ರಂಜಾನ್ ಗೆ ತೆಲಂಗಾಣ ಸರ್ಕಾರದ ಉಚಿತ ಉಡುಗೆ: ಸುರೇಶ್ ಚಾವಂಕೆ ಹಂಚಿಕೊಂಡ ಚಿತ್ರ ಕನಿಷ್ಠ 5 ವರ್ಷ ಹಳೆಯದ್ದು
ಮೇ 11ರಂದು, ಸುದರ್ಶನ್ ನ್ಯೂಸ್ ಪ್ರಧಾನ ಸಂಪಾದಕ ಸುರೇಶ್ ಚಾವಂಕೆ ಅವರು ಗುಲಾಬಿ ಬಣ್ಣದ ಚೀಲದ ಫೋಟೋವನ್ನು ಟ್ವೀಟ್ ಮಾಡಿದ್ದರು. ಆ ಚೀಲದ ಮೇಲೆ ‘ಈದ್ ಮುಬಾರಕ್ ರಂಜಾನ್ ಗಿಫ್ಟ್ ತೆಲಂಗಾಣ ಸರ್ಕಾರ’ ಎಂದು ಮುದ್ರಿಸಲಾಗಿತ್ತು. ಟ್ವೀಟ್ನಲ್ಲಿ, ಚಾವಂಕೆ ಹಿಂದಿಯಲ್ಲಿ ಹೀಗೆ ಬರೆದಿದ್ದರು: “ತೆಲಂಗಾಣ ಸರ್ಕಾರವು ರಂಜಾನ್ಗೆಂದು ಮುಸ್ಲಿಮರಿಗೆ ಉಚಿತ, ವಿಶೇಷ ಕಿಟ್ಗಳನ್ನು ನೀಡುತ್ತಿದೆ. ಹಿಂದೂ ಹಬ್ಬಗಳಾದ ರಾಮನವಮಿ, ಹನುಮಾನ್ ಜಯಂತಿ, ಉಗಾದಿ ಹಬ್ಬಗಳಲ್ಲಿ ಮನೆಗಳಿಂದ ಹೊರಬರಲುಸಹ ನಿಷೇಧಿಸಲಾಗಿತ್ತು. “ಈ ಟ್ವೀಟ್ ಅನ್ನು 8000 ಬಾರಿ ರಿಟ್ವೀಟ್ ಮಾಡಲಾಗಿದೆ. (ಆರ್ಕೈವ್ ಲಿಂಕ್)
ಹಲವಾರು ಫೇಸ್ಬುಕ್ ಮತ್ತುಟ್ವಿಟರ್ ಬಳಕೆದಾರರು ಸಹ ವೈರಲ್ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಹಳೆಯ ಛಾಯಾಚಿತ್ರ
ಆಲ್ಟ್ ನ್ಯೂಸ್ ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ ಮೇಲೆ, 2020ರಲ್ಲಿ ತೆಲಂಗಾಣ ಸರ್ಕಾರ ರಂಜಾನ್ ಉಡುಗೊರೆಗಳನ್ನು ನೀಡಿರುವ ಯಾವುದೇ ವರದಿಗಳಿಲ್ಲ ಎಂದು ಕಂಡುಹಿಡಿದಿದೆ.
ಮೇ 12ರಂದು, ತೆಲಂಗಾಣ ಸರ್ಕಾರದ ಅಧಿಕಾರಿಯೊಬ್ಬರು “ಈ ವರ್ಷ ತೆಲಂಗಾಣ ಸರ್ಕಾರವು ಕರೋನಾ ಪರಿಸ್ಥಿತಿಯಿಂದಾಗಿ ರಂಜಾನ್ ಉಡುಗೊರೆಯನ್ನು ನೀಡುತ್ತಿಲ್ಲ. ಈ ಟ್ವೀಟ್ ಯಾರದೋ ಕುಚೇಷ್ಟೆಯಾಗಿದೆ ಏಕೆಂದರೆ ಇದು ರಾಜ್ಯ ಸರ್ಕಾರ ಇಂತಹ ಹಬ್ಬದ ಉಡುಗೊರೆಗಳನ್ನು ಮುಸ್ಲಿಮರಿಗೆ ಮಾತ್ರ ನೀಡುತ್ತದೆ ಎಂದು ಸೂಚಿಸುತ್ತಿದೆ.” ಎಂದು ನ್ಯೂಸ್ ಮೀಟರ್ ಗೆ ತಿಳಿಸಿದ್ದಾರೆ. ನ್ಯೂಸ್ ಮೀಟರ್ ಫ್ಯಾಕ್ಟ್-ಚೆಕ್ ವರದಿಯು ಅಧಿಕಾರಿಯ ಹೇಳಿಕೆಯನ್ನು ದೃಢಪಡಿಸುವ ಸರ್ಕಾರದ ಸೂಚನೆಯನ್ನು ಸಹ ಒಳಗೊಂಡಿದೆ.
ಮುಂದೆ, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ಮೇಲೆ, ಚಾವಂಕೆ ಹಂಚಿಕೊಂಡ ಚಿತ್ರವು ಕನಿಷ್ಠ 2015 ನೆಯ ಇಸವಿಯ ಹಿಂದಿನದು ಎಂದು ಕಂಡುಕೊಂಡಿದ್ದೇವೆ. ಈ ಸಂಗಾತಿಯನ್ನು ತಮಿಳು ಬ್ಲಾಗ್ ಒಂದರಲ್ಲಿ ಪೋಸ್ಟ್ ಮಾಡಲಾಗಿದೆ.
ಈ ವೈರಲ್ ಚಿತ್ರವನ್ನು ಬಿಜೆಪಿ ಸದಸ್ಯ ರಾಜಾ ಸಿಂಗ್ ಅವರು 2015ರಲ್ಲಿ ಟ್ವೀಟ್ ಮಾಡಿದ್ದಾರೆ. “ತೆಲಂಗಾಣ ಸರ್ಕಾರ ಹಿಂದೂ ಹಬ್ಬಗಳಿಗೂ ಹೀಗೆ ಉಡುಗೊರೆ ಪ್ಯಾಕ್ ವಿತರಿಸಲು ನಾನು ಕಾಯುತ್ತಿದ್ದೇನೆ. ಅವರು ಕೊಡುತ್ತಾರೆಯೆ?” ಎಂದು ಪ್ರಶ್ನಿಸಿದ್ದಾರೆ (ಆರ್ಕೈವ್ ಮಾಡಿದ ಟ್ವೀಟ್)
I am waiting for Telangana Govt to distributing gift pack for Hindu Festivals also
WILL HE ? pic.twitter.com/kH9BziVHiX
— Raja Singh (@TigerRajaSingh) July 9, 2015
ಚಾವಂಕೆ ಅವರಂತೆಯೇ, ಹಿಂದೂ ಹಬ್ಬಗಳನ್ನು ತೆಲಂಗಾಣ ಸರ್ಕಾರವು ಕಡೆಗಣಿಸಬಾರದು ಎಂದು ಸಿಂಗ್ ಸೂಚಿಸಿದ್ದರು. ಈ ಹಿಂದೆ ರಾಜ್ಯ ಸರ್ಕಾರವು ರಂಜಾನ್ ಸಮಯದಲ್ಲಿ ಮಾತ್ರವಲ್ಲದೆ ಹಿಂದೂ ಹಬ್ಬವಾದ ಬಾತುಕಮ್ಮ ಮತ್ತು ಕ್ರಿಸ್ಮಸ್ಗಳಲ್ಲೂ ಉಡುಗೊರೆಗಳನ್ನು ನೀಡಿದೆ ಎಂಬುದನ್ನು ಓದುಗರು ಗಮನಿಸಬೇಕು. ಕೆಳಗಿನ ಸ್ಕ್ರೀನ್ಶಾಟ್ನಲ್ಲಿ ತೆಲಂಗಾಣ ಸರ್ಕಾರವು ಬಾತುಕಮ್ಮ, ಕ್ರಿಸ್ಮಸ್ ಮತ್ತು ರಂಜಾನ್ ಸಮಯದಲ್ಲಿನೀಡಿದ ಉಡುಗೊರೆಗಳ ಬಗೆಗಿನ 2019ರ ವರದಿಗಳನ್ನು ತೋರಿಸುತ್ತದೆ.
ಅಲ್ಲದೆ, ಲಾಕ್ಡೌನ್ ಸಮಯದಲ್ಲಿ ಯಾವುದೇ ಹಿಂದೂ ಹಬ್ಬಗಳನ್ನು ಆಚರಿಸಲಾಗಿಲ್ಲ ಎಂಬ ಚಾವಂಕೆ ಅವರ ಎರಡನೆಯ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ. ಏಪ್ರಿಲ್ನಲ್ಲಿ, ಎಕನಾಮಿಕ್ಟೈಮ್ಸ್, ದಿ ಪ್ರಿಂಟ್, ದಿ ನ್ಯೂಇಂಡಿಯನ್ಎಕ್ಸ್ ಪ್ರೆಸ್ ಮತ್ತು ಸ್ಕ್ರಾಲ್ – ಹಲವಾರು ಮಾಧ್ಯಮಗಳು ರಾಮನವಮಿ ಸಮಯದಲ್ಲಿ ಸಾಮಾಜಿಕ ಅಂತರವನ್ನುಉಲ್ಲಂಘಿಸಿದ ವರದಿಗಳನ್ನು ಪ್ರಕಟಿಸಿದ್ದವು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸುದರ್ಶನ್ ನ್ಯೂಸ್ ಪ್ರಧಾನ ಸಂಪಾದಕ ಸುರೇಶ್ ಚಾವಂಕೆ ರಂಜಾನ್ ಟ್ವೀಟ್ ಮಾಡಿರುವ ಉಡುಗೊರೆ ಪ್ಯಾಕ್ನ ಚಿತ್ರ ಕನಿಷ್ಠ ಐದು ವರ್ಷ ಹಳೆಯದ್ದು ಮತ್ತು ತೆಲಂಗಾಣ ಸರ್ಕಾರವು ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಉಚಿತ ಕಿಟ್ಗಳನ್ನು ನೀಡುತ್ತಿದೆ ಆದರೆ ಹಿಂದೂ ಹಬ್ಬಗಳಿಗೆ ಅದೇ ರೀತಿಯ ಕ್ರಮವನ್ನು ಅನುಸರಿಸಿಲ್ಲ ಎಂಬ ಮಹಿತಿಯೂ ಸರಳವಾದ ಗೂಗಲ್ ಹುಡುಕಾಟ ಸುಳ್ಳು ಎಂದು ತೋರಿಸುತ್ತದೆ.
(ಕೃಪೆ) ಆಲ್ಟ್ ನ್ಯೂಸ್
(ಕನ್ನಡಕ್ಕೆ): ದಿವ್ಯ ಶರ್ಮ