MLC election: ಪಕ್ಷಾಂತರಿಗಳಿಗೆ ಮಣೆ, ಹೈಕಮಾಂಡಿಗೆ 10 ಹೆಸರು ಶಿಫಾರಸು ಮಾಡಿದ BJP
ರಾಜ್ಯ ವಿಧಾನ ಪರಿಷತ್ತಿಗೆ ವಿಧಾನಸಭೆಯಿಂದ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕಿಯೆ ಮುಗಿದಿದ್ದು ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ , ಆರ್.ಶಂಕರ್ ಸೇರಿದಂತೆ 10 ಮಂದಿಯ ಹೆಸರನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ವರಿಷ್ಠ ಮಂಡಳಿಗೆ ಶಿಫಾರಸು ಮಾಡಿದೆ
ಇವರಲ್ಲದೇ ಕಲಬುರ್ಗಿಜಿಲ್ಲೆಯ ಮಾಜಿ ಶಾಸಕ ಸುನಿಲ್ ವಲ್ಯಾಪುರೆ ಯವರ ಹೆಸರನ್ನೂ ಶಿಫಾರಸು ಮಾಡಲಾಗಿದೆ. ವಲ್ಯಾಪುರೆ ಕಲಬುರ್ಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಉಮೇಶ್ ಜಾಧವ್ ಅವರ ಗೆಲುವಿಗೆ ಶ್ರಮಿಸಿದ್ದಲ್ಲದೇ ತಾನು ಪ್ರತಿನಿಧಿಸಿದ್ದ ಚಿಂಚೋಳಿ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಜಾಧವ್ ಅವರ ಪುತ್ರನಿಗೆ ಬಿಟ್ಟುಕೊಟ್ಟಿದ್ದರು.
ಪಕ್ಷ ನೀಡಿದ್ದ ಭರವಸೆಯಂತೆ ಅವರ ಹೆಸರನ್ನು ಎಂ.ಎಲ್ಸಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಇನ್ನುಳಿದಂತೆ ಮಾಜಿ ಶಾಸಕ ತುಮಕೂರಿನ ಸೊಗಡು ಶಿವಣ್ಣ, ಚನ್ನಪಟ್ಟಣದ ಸಿ.ಪಿಯೋಗೀಶ್ವರ್, ನಿರ್ಮಲಕುಮಾರ್ ಸುರಾನ ಹಾಗೂ ಪರಿಷತ್ತಿನ ಮಾಜಿ ಸದಸ್ಯರಾದ ಶಿವಮೊಗ್ಗದ ಎಂ.ಬಿ.ಭಾನುಪ್ರಕಾಶ್, ಶ್ರೀಮತಿ ಭಾರತಿ ಶೆಟ್ಟಿ, ಅಶ್ವತ್ಥನಾರಾಯಣ ಅವರ ಹೆಸರುಗಳೂ ದಿಲ್ಲಿ ವರಿಷ್ಠರಿಗೆ ಶಿಫಾರಸು ಮಾಢಿರುವ ಪಟ್ಟಿಯಲ್ಲಿವೆ.
ಅಭ್ಯರ್ಥಿ ಆಯ್ಕೆಯ ಚೆಂಡು ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು ನಾಳೆ ಸಂಜೆಯೊಳಗೆ ಪಟ್ಟಿ ಅಂತಿಮಗೊಳ್ಳಲಿದೆ. ಖಚಿತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದ ಭರವಸೆಯಂತೆ ಮೂವರು ವಲಸಿಗ ಮಾಜಿ ಸಚಿವರಿಗೆ ಹಾಗೂ ಪಕ್ಷ ನಿಷ್ಠ ಸುನಿಲ್ ವಲ್ಯಾಪುರೆ ಯವರ ಆಯ್ಕೆ ಅಂತಿಮವಾಗಲಿದೆ. ಆದರೆ ಕಡೇ ಘಳಿಗೆಯಲ್ಲಿ ಹೈಕಮಾಂಡ್ ಮನಸ್ಸು ಬದಲಿಸುವ ಸಾಧ್ಯತೆಗಳೂ ಇಲ್ಲದಿಲ್ಲ.