OMG : ಒಂದೇ ಕೊಠಡಿಯಲ್ಲಿ 4 ಜನ ಶಿಕ್ಷಕರಿಂದ 90 ಮಕ್ಕಳಿಗೆ ಪಾಠ…!
ಕ್ಲಾಸ್ ರೂಂ ಒಂದೇ. ಪಾಠ ಮಾಡೋ ಶಿಕ್ಷಕರು ನಾಲ್ಕು ಜನ. ಕೇಳೋ ಮಕ್ಕಳು 45 ಜನ. ಅರ್ಥ ಆಗುತ್ತೋ ಬಿಡುತ್ತೋ ಸೆಕೆಂಡ್ರಿ. ಆದ್ರೆ, ಯಾವ ಶಿಕ್ಷಕರು ಯಾವ, ಯಾವ ತರಗತಿಯ ಯಾವ ಮಕ್ಕಳಿಗೆ ಯಾವ ಪಾಠ ಮಾಡ್ತಿದ್ದಾರೆ ಅನ್ನೋದು ಮಕ್ಕಳಿಗಲ್ಲ ಟೀಚರ್ಗೆ ಗೊತ್ತಿಲ್ಲ. ಒಂದ್ ರೂಂನಲ್ಲಿ ಒನ್ ಟು ಫೋರ್ತ್ ಮಕ್ಳು. ಮತ್ತೊಂದ್ರಲ್ಲಿ ಫಿಫ್ತು-ಸಿಕ್ಸ್ತು. ಹೆಡ್ ಮಾಸ್ಟ್ರು ಚೇಂಬರ್ನಲ್ಲಿ ಏಳನೇ ತರಗತಿ ಮಕ್ಳು. ಟೀಚರ್ ಪಾಠ ಮಾಡ್ಲೇಬೇಕು, ಮಕ್ಳು ಕೇಳಲೇಬೇಕು. ಅದು ಇಬ್ಬರ ಧರ್ಮ-ಕರ್ಮ. ಇದು ಕಾಫಿನಾಡ ಸರ್ಕಾರಿ ಶಾಲೆ ಕಥೆ…….
ಪೂರ್ವಕ್ಕೆ 1ನೇ ತರಗತಿ ಮಕ್ಳು, ಎದುರಿಗೆ ಶಿಕ್ಷಕಿ. ಪಶ್ಚಿಮಕ್ಕೆ 2ನೇ ತರಗತಿ ಮಕ್ಳು, ಎದುರಿಗೆ ಶಿಕ್ಷಕಿ. ಉತ್ತರಕ್ಕೆ 3, ದಕ್ಷಿಣಕ್ಕೆ 4ನೇ ತರಗತಿ ಮಕ್ಳು, ಎದುರಿಗೆ ಶಿಕ್ಷಕ್ರು. ಇದು ಒಂದೇ ಕೊಠಡಿಯೊಳಗಿನ ಕಥೆ. ಇಲ್ಲಿ ಒಬ್ಬೊರಿಗೊಬ್ರು ಬೆನ್ ಹಾಕೊಂಡೇ ಪಾಠ ಕೇಳ್ಬೇಕು. ಒಂದೇ ಕೊಠಡಿಯೊಳಗೆ ಏಕಕಾಲಕ್ಕೆ ನಡೆಯುತ್ತೆ ನಾಲ್ಕು ಕ್ಲಾಸ್. ಬೇರೆ ಟೀಚರ್ ಹೇಳೋದ್ನ ಕೇಳಂಗಿಲ್ಲ. ನಮ್ ಟೀಚರ್ ಹೇಳೋದ್ನ ಮಾತ್ರ ಕೇಳ್ಬೇಕು.
ಅದು ಹೇಗ್ ಸಾಧ್ಯವೋ ದೇವ್ರೇ ಬಲ್ಲ. ಅಂದ ಹಾಗೆ, ಇದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಿ.ಬಸವನಹಳ್ಳಿಯ ಸರ್ಕಾರಿ ಶಾಲೆ. 6 ಜನ ಶಿಕ್ಷಕರು, 85 ಮಕ್ಕಳಿದ್ದಾರೆ. ಇರೋ ಕೊಠಡಿ ಮಾತ್ರ ನಾಲ್ಕೇ ನಾಲ್ಕು. ಅದ್ರಲ್ಲೂ ಒಂದು ಕಳಚಿ ಬಿದ್ದಿದೆ. ಇನ್ನೊಂದು ಬೀಳುವ ಹಂತದಲ್ಲಿದೆ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ-ಪ್ರವಚನ. ಇನ್ನೊಂದ್ ರೂಮಲ್ಲಿ ಐದು-ಆರರ ಮಕ್ಕಳು. ಹೆಡ್ ಮಾಸ್ಟ್ರು ರೂಂನಲ್ಲಿ ಏಳನೇ ತರಗತಿ ಮಕ್ಳು. ನಮ್ ಶಿಕ್ಷಕ್ರು ಹೇಳೋದ್ ಮಾತ್ರ ಕೇಳ್ಬೇಕು. ಪಕ್ಕದ್ ಮೇಷ್ಟ್ರು ಹೇಳೋದ್ನ ಕೇಳದಂತಹಾ ಅನಿವಾರ್ಯತೆ ಈ ಬಡಮಕ್ಕಳದ್ದು. ದೊಡ್ಡವರಿಗೆ ಏಕಾಗ್ರತೆ ತರೋದು ಕಷ್ಟ. ಅಂತದ್ರಲ್ಲಿ ಎಳೆ ಮಕ್ಕಳನ್ನ ಸಂತೆಯಲ್ಲಿ ಕೂರಿಸಿ ಪಾಠ ಕೇಳಿಸ್ತಿದೆ ಸರ್ಕಾರ……
ಇದು ಹೇಳೋಕಷ್ಟೆ ಹಿರಿಯ ಪ್ರಾಥಮಿಕ ಶಾಲೆ. ಆದ್ರೆ, ಯಾವ ಹಿರಿತನವಾಗ್ಲಿ-ಹೆಮ್ಮೆಯಾಗ್ಲಿ ಈ ಶಾಲೆಗಿಲ್ಲ. 2007ರವರೆಗೆ ಕಿರಿಯ ಪ್ರಾಥಮಿಕ ಶಾಲೆ ಇದ್ದ ಈ ಶಾಲೆಯನ್ನ ಸರ್ಕಾರ 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮಾಡ್ತು. ಅಂದಿನಿಂದಲೂ ಬಿಲ್ಡಿಂಗ್ ಕೇಳ್ತಿದ್ದಾರೆ ಕೊಟ್ಟಿಲ್ಲ. ಇಷ್ಟು ದಿನ ಇದ್ದ ಕೊಠಡಿಯಲ್ಲಿ ಈಗ ಎರಡು ರೂಂ ಸಂಪೂರ್ಣ ಹಾಳಾಗಿವೆ. ಕಳೆದ ಎರಡ್ಮೂರು ವರ್ಷಗಳಿಂದ ಇಲ್ಲಿನ ಮಕ್ಕಳು ಇದೇ ರೀತಿ ಪಾಠ ಕೇಳ್ತಿದ್ದಾರೆ. ಕೊಠಡಿಗಾಗಿ ಅರ್ಜಿ ಬರೆದು ಅದಕ್ಕೆ ಸಹಿ ಹಾಕಿ ಕೈ ನೋವಾಗಿದೆ ಸರ್ ಅಂತಾರೆ ಶಾಲಾ ಆಡಳಿತ ಮಂಡಳಿಯವ್ರು. ನಾಲಾಯಕ್ ಹಾಗೂ ಬೇಜಬ್ದಾರಿ ಹಾಗೂ ಅಧಿಕಾರಿಗಳು ಶಿಕ್ಷಣದ ಮಾರ್ಯಾದೆಯನ್ನ ಕಳೆಯುತ್ತಿದ್ದಾರೆ. ಉದ್ದುದ್ದ ಭಾಷಣ ಮಾಡೋ ಜನಪ್ರತಿನಿಧಿಗಳಿಗಾಗಲಿ, ಸರ್ಕಾರಕ್ಕಾಗಲಿ ಈ ಮಕ್ಕಳು ಪಡ್ತಿರೋ ಪಡಿಪಾಟಲು ಕಾಣಿಸ್ತಿಲ್ವೋ ಅಥವ ಕಣ್ಣಿದ್ದು ಕುರುಡರಾಗಿದ್ದಾರೋ ಗೊತ್ತಿಲ್ಲ. ಆದ್ರೆ, ಮಕ್ಳು ಅನುಭವಿಸ್ತಿರೋ ನೋವಂತು ಯಾರಿಗೂ ಕಾಣ್ತಿಲ್ಲ……
ಒಟ್ಟಾರೆ, ಶಿಕ್ಷಣ ಮಕ್ಕಳ ಹಕ್ಕು. ಶಿಕ್ಷಣ ನಿಡೋದು ಸರ್ಕಾರದ ಜವಾಬ್ದಾರಿ. ಆದ್ರೆ, ಇಂತಹಾ ಶಿಕ್ಷಣ ಕೊಡ್ತಿರೋದು ಮಾತ್ರ ಮಹಾ ದುರಂತ. ದನಗಳನ್ನ ಕೂಡಿದಂತೆ ಕೂಡಿ ಶಿಕ್ಷಣ ನೀಡಿ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ತಿದೆ. 21ನೇ ಶತಮಾನದಲ್ಲೂ ಮಕ್ಳು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕಾ ಅನ್ನೋದು. ಜನಸಮಾನ್ಯರ ಪ್ರಶ್ನೆ. ಸರ್ಕಾರಿ ಶಾಲೆ ಮುಚ್ಚಲ್ಲ ಅನ್ನೋ ಸರ್ಕಾರ, ಇಂತಹಾ ಸೌಲಭ್ಯ ಕೊಟ್ರೆ ಸರ್ಕಾರ ಮುಚ್ಚೋದ್ ಬೇಡ. ಮಕ್ಳು ಕೂಲಿಗೆ ಹೋಗ್ತಾವೆ, ಸ್ಕೂಲು ಬಾಗಿಲು ಹಾಕುತ್ತೆ. ಶಿಕ್ಷಣ-ಶಿಕ್ಷಣ ಅಂತ ಗಂಟಲು ಹರ್ಕೊಳ್ಳೋ ಜನನಾಯಕರು ಒಮ್ಮೆ ಇತ್ತ ಗಮನ ಹರಿಸ್ಲಿ ಅನ್ನೋದು ನಮ್ಮ ಆಶಯ….