ಅಂಗನವಾಡಿ ಕೇಂದ್ರಕ್ಕೆ ಬಂದ ಮಸಾಲೆ ಪೌಡರ್ನಲ್ಲಿ ಬರ್ತಿದೆ ಮ್ಯಾಗಿ ನೂಡಲ್ಸ್ ಪೌಡರ್ ವಾಸನೆ…!
ಬಾಗಲಕೋಟೆ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಳೆದ ತಿಂಗಳು ಮಸಾಲೆ ಪೌಡರ್ ವಿತರಣೆ ಮಾಡಲಾಗಿದೆ.ಮಸಾಲೆ ಪೌಡರ್ ನಿಂದ ತಯಾರಿಸಲಾಗುತ್ತಿರೋ ಆಹಾರ ರುಚಿಯಾಗುತ್ತಿಲ್ಲ, ಜೊತೆಗೆ ಮಸಾಲೆ ಪೌಡರ್ ಮ್ಯಾಗಿ ನ್ಯೂಡಲ್ಸ್ ಮಸಾಲೆ ವಾಸನೆ ಬರುತ್ತಿದೆ.ಮಸಾಲೆ ಪೌಡರ್ ವಿತರಣೆ ಮಾಡಿರುವುದರಿಂದ ಮೆಣಸಿನಕಾಯಿ ಸರಬರಾಜು ಮಾಡಿಲ್ಲ.ಇದ್ರಿಂದ ಮಸಾಲೆ ಪೌಡರ್ ಹಾಕಿ ಸಾಂಬಾರ್, ಅಡುಗೆ ಮಾಡಿದ್ರೆ ರುಚಿಯಾಗುತ್ತಿಲ್ಲ ಅಂತಾರೆ ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ..
ಮೇ ತಿಂಗಳಲ್ಲಿ ತಯಾರಾದ ಮಸಾಲೆ ಪೌಡರ್.. ಡಿಸೆಂಬರ್ ಆರಂಭದಲ್ಲಿ ವಿತರಣೆ
ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಹುನಗುಂದ,ಬೀಳಗಿ,ಮುಧೋಳ,ಹಾಗೂ ಜಮಖಂಡಿ 6ತಾಲೂಕಿಗೆ ಎಂಎಸ್ ಪಿಟಿಸಿ ಸಂಸ್ಥೆಗಳು ಆಯಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತವೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಿರುವ ಮಸಾಲೆ ಪೌಡರ್ ತಯಾರಿಸಿದ ದಿನಾಂಕ ಮೇ-2019 ತಿಂಗಳಂತಿದೆ.ಜೊತೆಗೆ ಉಪಯೋಗಿಸಬೇಕಾದ ಕಡೆಯ ದಿನಾಂಕ 31ಡಿಸೆಂಬರ್ 2019 ಎಂದಿದೆ. ಇನ್ನು ಮಸಾಲೆ ಪೌಡರ್ ಗುಣಮಟ್ಟದ್ದಾಗಿಲ್ಲವೆಂದು ಕೆಲ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಬೇಡಿ ಎಂದು ತಗಾದೆ ತೆಗೆದಿದ್ದರಂತೆ.ಹೀಗಾಗಿ ಅಂಗನವಾಡಿ ಕೇಂದ್ರಕ್ಕೆ ಮಸಾಲೆ ಪೌಡರ್ ಸರಬರಾಜು ವಿಳಂಬವಾಗಿದೆ.
ಆದ್ರೆ ಕೊನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಮೂಲಕ ಒತ್ತಡ ತಂದು ಎಂಎಸ್ ಪಿಟಿಸಿ ಸಂಸ್ಥೆಗಳು ಅಂಗನವಾಡಿ ಕೇಂದ್ರಗಳಿಗೆ ಮಸಾಲೆ ಪೌಡರ್ ಸರಬರಾಜು ಮಾಡಿದ್ದಾರೆ ಎನ್ನಲಾಗಿದ್ದು, ಉಪಯೋಗಿಸುವ ಕೊನೆ ದಿನ ಒಂದು ತಿಂಗಳು ಇರುವಷ್ಟರಲ್ಲೇ ತರಾತುರಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮಸಾಲೆ ಪೌಡರ್ ಸರಬರಾಜು ಮಾಡಿ, ಬಿಲ್ ಪಡೆದಿದ್ದಾರಂತೆ.ಪೌಡರ್ ಉಪಯೋಗಿಸುವ ಕೊನೆ ದಿನಾಂಕ ಗೊತ್ತಿದ್ರೂ ಅಂಗನವಾಡಿ ಕೇಂದ್ರಗಳಿಗೆ ಮಸಾಲೆ ಪೌಡರ್ ವಿತರಿಸಿರುವದು ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದೀಗ ಮಸಾಲೆ ಪೌಡರ್ ಉಪಯೋಗಿಸುವ ಡಿಸೆಂಬರ್ 31,2019, ಕೊನೆ ಅವಧಿ ಮುಗಿದಿದೆ.ಆದ್ರೆ ಅಂಗನವಾಡಿ ಕೇಂದ್ರಗಳಲ್ಲಿ ಮಸಾಲೆ ಪೌಡರ್ ಇನ್ನು ಉಳಿದಿದ್ದು, ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಇನ್ನು ಅದೇ ಪೌಡರ್ ಬಳಸಲಾಗುತ್ತಿದೆ.ಇದ್ರಿಂದ ಅಂಗನವಾಡಿ ಕೇಂದ್ರದಲ್ಲಿ ಆಹಾರ ಸೇವಿಸುವ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಪ್ರಜ್ಞಾವಂತರು ಪ್ರಶ್ನಿಸುವಂತಾಗಿದೆ..
ಅಧಿಕಾರಿಗಳು ಹೇಳೋದೇನು!?
ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿಯವರನ್ನು ಕೇಳಿದ್ರೆ ಅವರು ಹೇಳೋದ್ದು ಹೀಗೆ. ಬಾಗಲಕೋಟೆ ಜಿಲ್ಲೆಯ ಎಲ್ಲಾ ಸಿಡಿಪಿಒಗಳಿಗೆ ಪತ್ರ ಬರೆಯುತ್ತೇವೆ.ಅವಧಿ ಮೀರಿದ ಮಸಾಲೆ ಪೌಡರ್ ಬಳಕೆ ಮಾಡದಂತೆ ಸೂಚಿಸಲಾಗುವುದು.ಜೊತೆಗೆ ಗುಣಮಟ್ಟದ ಆಹಾರ ಪದಾರ್ಥ ಸರಬರಾಜಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.