ಅಂಕೆಗೆ ನಿಲುಕದ ಕೊರೊನಾ: ಜಾಗೃತಿ ಮೂಡಿಸಲು ರಮೇಶ್ ಅರವಿಂದ್ ರಾಯಭಾರಿ!
ರಾಜ್ಯದಲ್ಲಿ ಕೊರೊನಾ ಬಾಧಿತರ ಪ್ರಮಾಣ 4 ಸಾವಿರದ ಗಡಿ ಆಚೆಗೇ ಉಳಿದುಕೊಂಡಿದೆ. ಏಳು ಜಿಲ್ಲೆಗಳಲ್ಲಿ ಲಾಕ್ಡೌನ್ ಇದ್ದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದ್ದು ಭಾನುವಾರವೂ 4120 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿಯಂತ್ರಣಕ್ಕೆ ಬಾರದ ವೈರಸ್ ಬಗ್ಗೆ ಜಾಗೃತಿ ಮುಡಿಸಲು ರಾಜ್ಯ ಸರಕಾರ ಕೊನೆಗೂ ಎಚ್ಚೆತ್ತುಕೊಂಡಿದೆ.. ಕೊರೋನಾ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಅವರನ್ನ ನೇಮಿಸಿದೆ…
ಇದೇ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಂಕೆ ಮೀರಿದ್ದು ಭಾನುವಾರ 2156 ಮಂದಿಯಲ್ಲಿ ಸೋಂಕು ಕಾಣಿಸಿದೆ. ಈ ಮಧ್ಯೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು ಭಾನುವಾರ 1290 ಮಂದಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ 39370 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 23,065 ಮಂದಿ ಕೊರೋನಾ ಗೆದ್ದು ಮನೆ ಸೇರಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಏರುತ್ತಿದ್ದರೂ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಒಟ್ಟು ಶೇ. 36.1 ಮಂದಿ ಸೋಂಕಿನಿಂದ ಹೊರಬಂದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಇತ್ತೀಚೆಗೆ ದಿನನಿತ್ಯ 2ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿತ್ತಿದ್ದು ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಬಿಬಿಎಂಪಿ ಹರ ಸಾಹಸ ಪಡುತ್ತಿದೆ.
ಈ ನಡುವೆ ಕೊರೊನಾ ಜಾಗೃತಿ ರಾಯಭಾರಿಯಾಗಿ ನಟ ರಮೇಶ್ ಅರವಿಂದ್ ಅವರನ್ನ ನೇಮಿಸಿ ಆದೇಶಿಸಿದೆ. ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಟ ರಮೇಶ್ ಅರವಿಂದ್ ಅವರನ್ನ ಕೊರೋನಾ ರಾಯಭಾರಿಯನ್ನಾಗಿ ನೇಮಿಸಿದೆ.