ಕೊರೊನಾ ಕಿಟ್ ಭ್ರಷ್ಟಾಚಾರಕ್ಕೆ ದಾಖಲೆ ತೋರಿಸಿ; ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲು!
ಕೊರೊನಾ ಚಿಕಿತ್ಸೆಗಾಗಿ ಪಿಪಿಇ ಕಿಟ್ ಮತ್ತು ಉಪಕರಣಗಳ ಖರೀದಿಯಲ್ಲಿ 2,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ಭಾನುವಾರ ಸರಣಿ ಟ್ವೀಟ್ಗಳನ್ನೂ ಮಾಡಿದ್ದರು. ಸಿದ್ದರಾಮಯ್ಯನವರ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಪ್ರತಿಕ್ರಿಯಿಸಿದ್ದು, ಅವರ ಆರೋಪಗಳಿಗೆ ದಾಖಲೆ ಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲೇ ಕೂರಲಿ. ನಾನೇ ಅಧಿಕಾರಿಗಳಿಗೆ ಎಲ್ಲಾ ಕಡತಗಳನ್ನು ನೀಡುವಂತೆ ಹೇಳುತ್ತೇನೆ. ಈ ಕಡತಗಳನ್ನು ಪರಿಶೀಲಿಸಿ ಏನಾದರೂ ತಪ್ಪು ಕಂಡು ಬಂದರೇ ಹೇಳಲಿ ಎಂದು ಸಿದ್ದರಾಮಯ್ಯಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಆರೋಪಕ್ಕೆ ನಾನು ಇನ್ನೂ ಉತ್ತರ ನೀಡಿಲ್ಲ. ನೀವು ಕೇಳುತ್ತಿರುವುದಕ್ಕೆ ನಾನು ಹೇಳುತ್ತಿದ್ದೇನೆ. ಕೋವಿಡ್-19 ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ದಾಖಲೆ ನೀಡಲಿ, ಯಾರೇ ತಪ್ಪು ಮಾಡಿದರೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಸುಖಾಸುಮ್ಮನೇ ಆರೋಪ ಮಾಡುವುದು ಬೇಡ. ದಾಖಲೆಯೊಂದಿಗೆ ಮಾತಾಡಲಿ. ಯಾವುದೇ ಅಧಿಕಾರಿ ತಪ್ಪು ಮಾಡಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಯಾರು ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ. ನೀವು ಕೊರೋನಾ ಜೊತೆಗೆ ಬದುಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಸರ್ಕಾರದೊಂದಿಗೆ ಬೆಂಗಳೂರಿನ ಜನ ಸಹಕರಿಸಿ ಎಂದು ಮನವಿ ಮಾಡಿದರು ಬಿಎಸ್ವೈ.
ಬೆಂಗಳೂರಿನಲ್ಲಿ 450 ಆ್ಯಂಬುಲೆನ್ಸ್, 10 ಸಾವಿರ ಹೆಚ್ಚುವರಿ ಬೆಡ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹೆಚ್ಚು ಆರೋಗ್ಯ ಸವಲತ್ತು ಕೊಡಲು ಕ್ರಮಕೈಗೊಂಡಿದ್ದೇವೆ. ಹೀಗಾಗಿ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.ಡಾ. ಬಾಬು ಜಗಜೀವನರಾಂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಇವರು ಸಾಮಾಜಿಕ ಹರಿಕಾರ ಎಂದೇ ಖ್ಯಾತಿಗಳಿಸಿದ್ದಾರೆ. ಇಂತಹ ಮಹಾನ್ ನಾಯಕರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಿದೆ ಎಂದರು.