Bangalore Lockdown: ಬಾನದಾರಿ ಹಿಡಿದು ತಮ್ಮೂರಿಗೆ ಹಾರುತ್ತಿದ್ದಾರೆ ಬೆಂಗಳೂರು ಜನ!
ಲಾಕ್ಡೌನ್ನಿಂದಾಗಿ ಬೆಂಗಳೂರು ಬಣಗುಡುತ್ತಿದೆ. ಬೆಂಗಳೂರಿನಲ್ಲಿ ನೆಲಸಿದ್ದ ಬೇರೆಯೂರಿನವರೆಲ್ಲಾ ತಮ್ಮ ತಮ್ಮ ಊರಿಗೆ ಗುಳೆ ಹೋಗುತ್ತಿದ್ದಾರೆ. ಗಡಿಬಿಡಿಯಲ್ಲಿ ಬಸ್, ಟೆಂಪೋ, ಲಾರಿ ಹಿಡಿದು, ಸಿಕ್ಕ ವಾಹನ ಹಿಡಿದು ತಮ್ಮ ತಮ್ಮ ಉರು ಸೇರಿಕೊಳ್ಳುತ್ತಿದ್ದಾರೆ..ಈಗ ನೆರೆ ರಾಜ್ಯಗಳ ಜನರು ವಿಮಾನ ಏರಿ ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳುತ್ತಿದ್ದಾರೆ. ರಸ್ತೆ ಸಾರಿಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ಬಾನ ದಾರಿಯಲ್ಲೂ ಪ್ರಯಾಣಕ್ಕೆ ಮುಂದಾಗಿದ್ದಾರೆ ಉದ್ಯಾನ ನಗರದ ನಾಗರಿಕರು…
ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ಬುಕ್ ಮಾಡಿದ್ದ ಕಾರಣ ಬುಧವಾರ ಒಂದೇ ದಿನ ಬರೋಬ್ಬರಿ 63 ವಿಮಾನಗಳನ್ನ ಶೆಡ್ಯುಲ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಚ್ಚಿನ ಪ್ರಯಾಣಿಕರು ಗುಳೆ ಹೊರಟರೆ ಇನ್ನು ಹೆಚ್ಚಿನ ವಿಮಾನಗಳನ್ನು ಹಾರಿಸಲು ನಿರ್ಧರಿಸಲಾಗಿದೆ..
ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನೇ ದಿನೇ ಕೈಮೀರುತ್ತಲೇ ಇದೆ. ಹೀಗಾಗಿ ತಜ್ಞರ ಅಭಿಪ್ರಾಯದಂತೆ ರಾಜ್ಯದಲ್ಲಿ ಒಂದು ವಾರದ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಪರಿಣಾಮ ಕಳೆದ ಎರಡು ದಿನಗಳಿಂದ ಬೇರೆ ಬೇರೆ ಜಿಲ್ಲೆಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಗಡಿಬಿಡಿಯಲ್ಲಿ ಬಸ್, ಟೆಂಪೋ, ಲಾರಿ ಹಿಡಿದು ಹೊರಟಿದ್ದು ಸುದ್ದಿ ಸದ್ದು ಮಾಡಿತ್ತು.
ಆದರೆ, ಇದೀಗ ಬೇರೆ ಬೇರೆ ರಾಜ್ಯಗಳಿಗೆ ತೆರಳಬೇಕಿರುವವರು ಗುಳೆ ಹೊರಡಲು ವಿಮಾನ ನಿಲ್ದಾಣಕ್ಕೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಬೆಂಗಳೂರನ್ನು ತೊರೆದು ತಮ್ಮ ಊರಿಗೆ ಹೋಗಿ ನೆಲೆಸಲು ವಿಮಾನಗಳ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟು ದಿನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿತ್ತು. ಆದ್ರೀಗ ಮತ್ತೆ ಒಂದು ವಾರದ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ, ಖಾಲಿ ಇದ್ದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ಬಣಗುಡುತ್ತಿದೆ.